ಬಸವನಬಾಗೇವಾಡಿ: ತಾಲ್ಲೂಕಿನ ಸುಕ್ಷೇತ್ರ ಮುತ್ತಗಿ ಗ್ರಾಮದ ರುದ್ರಮುನಿ ಶಿವಾಚಾರ್ಯರ ಪುಣ್ಯಾರಾಧನೆ ನಿಮಿತ್ತ ಭಾನುವಾರ ಜಾನುವಾರುಗಳ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳು ಬಂದಿದ್ದು, ಖರೀದಿ ಭರಾಟೆಯು ಜೊರಾಗಿದೆ.
ಎಂಟು ವರ್ಷಗಳಿಂದ ರುದ್ರಮುನಿ ಶಿವಾಚಾರ್ಯರ ಪುಣ್ಯಾರಾಧನೆ ನಿಮಿತ್ತ ಆಯೋಜಿಸುವ ಜಾನುವಾರು ಗಳ ಜಾತ್ರೆಯು ಪ್ರಸಿದ್ದಿ ಪಡೆದಿದೆ.
ಜಾತ್ರಾ ಕಮಿಟಿಯವರು ಶ್ರೀಮಠದ ಜಮೀನಿನಲ್ಲಿ ಜಾನುವಾರುಗಳಿಗೆ ಮತ್ತು ರೈತರಿಗೆ ಕುಡಿಯುವ ನೀರು ಸೇರಿದಂತೆ ಇತರ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ದೂರದ ಊರಿನಿಂದ ಆಗಮಿಸುವ ರೈತರು ಜಾನುವಾರುಗ ಳೊಂದಿಗೆ ಕಣಿಕೆ, ಹೊಟ್ಟು, ಹಿಂಡಿ ಯನ್ನು ತೆಗೆದುಕೊಂಡು ಬಂದು ತಮ್ಮ ರಾಸುಗಳ ವ್ಯವಹಾರ ಕುದುರಿಸುವ ದೃಶ್ಯ ಕಂಡು ಬಂದಿತು.
ಈ ವರ್ಷದ ಜಾತ್ರೆಯಲ್ಲಿ ಕಿಲಾರಿ, ಮಿಶ್ರ ತಳಿ, ಜವಾರಿ ತಳಿಯ ರಾಸುಗಳು ಹೆಚ್ಚಿನ ಸಂಖ್ಯೆಯಲ್ಲಿವೆ, ರಾಸುಗಳು ಕನಿಷ್ಟ 50 ಸಾವಿರದಿಂದ 1 ಲಕ್ಷದ ವರೆಗೆ ಮಾರಾಟವಾಗುತ್ತವೆ. ರಾಸಿನ ಉದ್ದ, ಎತ್ತರ, ತಳಿ, ಕಾಲು, ಕೊಂಬು, ವಯಸ್ಸಿನ ಆಧಾರಿತ ಬೆಲೆ ನಿಗದಿಪಡಿ ಸಲಾಗುತ್ತದೆ ಎಂದು ತಳೇವಾಡದ ರೈತ ಸಂಗಪ್ಪ ಬೆಲ್ಲದ ಹೇಳಿದರು.
ರೈತರು ಟ್ಯಾಕ್ಟರ್ ಮೋರೆ ಹೋಗಿದ್ದರಿಂದ ಉತ್ತಮ ರಾಸುಗಳನ್ನು ಮಾತ್ರ ರೈತರು ಖರೀದಿಸುತ್ತಾರೆ, ಸುಮಾರು ಕೋಟಿ ರೂಗಳಿಗೂ ಹೆಚ್ಚು ವ್ಯಾಪಾರ ವಹಿವಾಟ ನಡೆಯುತ್ತದೆ ಎನ್ನುತ್ತಾರೆ ಇಲ್ಲಿಯ ಕೆಲ ರೈತರು. ಜಾನುವಾರುಗಳಿಗೆ ಹಾಗೂ ಕೃಷಿ ಚಟುವಟಿಕೆಗೆ ಅವಶ್ಯಕವಾದ ಹಗ್ಗ, ಮಿಣಿಹಗ್ಗ, ಕೊಂಬೆಣಸು, ಗಂಟೆ, ಬಾರುಕೋಲು ಇತ್ಯಾದಿ ಖರೀದಿ ಭರಾಟೆ ಜೋರಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.