ವಿಜಾಪುರ: ಹೋರಾಟಗಾರ, ಸಾಹಿತಿ, ರಂಗಭೂಮಿ ಕಲಾವಿದ ರಘುನಾಥ ಬಾಣಿಕೋಲ ಅವರಿಗೆ ಪುಸ್ತಕದಲ್ಲಿ ತುಲಾಭಾರ ನೆರವೇರಿಸಿದ ಅಪರೂಪದ ಕಾರ್ಯಕ್ರಮ ಬುಧವಾರ ಸಂಜೆ ಇಲ್ಲಿ ನೆರವೇರಿತು.
ಭೃಂಗಿಮಠ ಕಾನೂನು ಹಾಗೂ ಸಾಮಾಜಿಕ ಕ್ರಿಯಾತ್ಮಕರ ವೇದಿಕೆ, ಪವಾಡ ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಮಂಡಳಿ ಸಹಯೋಗದಲ್ಲಿ ಇಲ್ಲಿಯ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಘುನಾಥ ಬಾಣಿಕೋಲ ಅವರು ತಾವು ಬರೆದಿರುವ ಕವನಗಳನ್ನು ಓದಿದಾಗ ಅವುಗಳಿಗೆ ಗಾಯಕ ದೇವದಾಸ ತೊರವಿ, ಮಲ್ಲಿಕಾರ್ಜುನ ಭೃಂಗಿಮಠ ಅವರು ರಾಗ ಸಂಯೊಜನೆ ಮಾಡಿ ಹಾಡಿ ಮುಗಿಸುವಷ್ಟರಲ್ಲೇ ಹಿರಿಯ ಕಲಾವಿದರಾದ ಪೊನ್ನಪ್ಪ ಕಡೇಮನಿ, ಬಸವರಾಜ ಗವಿಮಠ, ವಿ.ವಿ. ಹಿರೇಮಠ ಅವರು ಭಾವನೆಗಳ ಅಭಿವ್ಯಕ್ತಿಯ ಕಲಾಕೃತಿ ರಚಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಡಾ.ಆರ್.ಸಿ. ಮುದ್ದೇಬಿಹಾಳ, ಸಾಹಿತ್ಯ ಸಾಧಕರಿಗೆ ಪುಸ್ತಕ ತುಲಾಭಾರದಂತಹ ಕಾರ್ಯಕ್ರಮದ ಮೂಲಕ ಅಭಿನಂದಿಸಿ ಸನ್ಮಾನಿಸಿದರೆ ಅವರ ಸೇವೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಕಲಾವಿದ ಬಸವರಾಜ ಗವಿಮಠ, ಈ ಪುಸ್ತಕ ತುಲಾಭಾರ ವಿಶ್ವದ ಇತಿಹಾಸದಲ್ಲೇ ಪ್ರಥಮ ಎಂದು ಹೇಳಿದರು.
ರಘುನಾಥ ಬಾಣಿಕೋಲ ಮಾತನಾಡಿ, ಸಾಹಿತ್ಯ ಸಮ್ಮೇಳನ ಅಧ್ಯಕ್ಷರಿಗೆ ಪುಸ್ತಕ ತುಲಾಭಾರದ ಮೂಲಕ ಗೌರವಿಸುವ ಹೊಸ ಸಂಸ್ಕೃತಿ ಈಗಲಾದರೂ ಆಚರಣೆಗೆ ಬರಬೇಕು ಎಂದು ಸಲಹೆ ನೀಡಿದರು.
ಇಟಗಿಯ ಶಾಂತವೀರ ದೇವರು, ಶಂಕರಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ ಭೃಂಗಿಮಠ ಅಧ್ಯಕ್ಷತೆ ವಹಿಸಿದ್ದರು. ಶಿವಪುತ್ರಯ್ಯ ನಂದಿಕೋಲಮಠ, ಟಿ.ಎಸ್.ಪಠಾಣ, ಪ್ರದೀಪ ಕುಲಕರ್ಣಿ, ಐ.ಜಿ. ಮಠಪತಿ, ಎಸ್.ಆರ್. ನಾಯಕ, ಶಿವಕಾಂತಮ್ಮ ಮಠ ಅತಿಥಿಯಾಗಿದ್ದರು.
ರೇವಣಸಿದ್ದಯ್ಯ ಭೃಂಗಿಮಠ ಪ್ರಸ್ತಾವಿಕ ಮಾತನಾಡಿದರು. ಡಾ.ಆನಂದ ಕುಲಕರ್ಣಿ ಪರಿಚಯಿಸಿದರು. ಶರಣಗೌಡ ಪಾಟೀಲ, ಸುಭಾಸ ಕನ್ನೂರ ಕಾರ್ಯಕ್ರಮ ನಿರೂಪಿಸಿದರು. ವಕೀಲ ರಮೇಶ ವಗ್ಗರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.