ADVERTISEMENT

ರೇಡಿಯೊ ಶ್ರೋತೃಗಳಾಗಲು ಸಲಹೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 5:20 IST
Last Updated 13 ಫೆಬ್ರುವರಿ 2012, 5:20 IST
ರೇಡಿಯೊ ಶ್ರೋತೃಗಳಾಗಲು ಸಲಹೆ
ರೇಡಿಯೊ ಶ್ರೋತೃಗಳಾಗಲು ಸಲಹೆ   

ವಿಜಾಪುರ: `ಮಾಹಿತಿ-ಮನರಂಜನೆ ನೀಡುವ ಮೂಲಕ ಜನರನ್ನು ಉತ್ತಮ ನಾಗರಿಕರನ್ನಾಗಿಸುವಲ್ಲಿ ಆಕಾಶವಾಣಿಯ ಪಾತ್ರ ಪ್ರಮುಖವಾದುದು~ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಲ್. ಸುಬ್ರಹ್ಮಣ್ಯ ಹೇಳಿದರು.

ಇಲ್ಲಿಯ ಆಕಾಶವಾಣಿ ಕೇಂದ್ರದಿಂದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ `ಆಕಾಶವಾಣಿ ಹಬ್ಬ~ ಉದ್ಘಾಟಿಸಿ ಮಾತನಾಡಿದರು.

`ಆಕಾಶವಾಣಿ ನನ್ನ ಬಾಳ ಸಂಗಾತಿಯಾಗಿದೆ. ಚಿತ್ರಗೀತೆ, ಕೃಷಿ ರಂಗ, ಚಿಂತನ ಮತ್ತಿತರ ಕಾರ್ಯಕ್ರಮಗಳು ಬಹುಜನತೆಯನ್ನು ಆಕರ್ಷಿಸಿವೆ. ರೇಡಿಯೊ ಕೇಳುವ ಹವ್ಯಾಸವನ್ನು ಯುವಜನತೆಯೂ ರೂಢಿಸಿಕೊಳ್ಳಬೇಕು~ ಎಂದರು.

`ವಿಜಾಪುರದ ಕೇಂದ್ರ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಕ್ರಮಗಳನ್ನು ಬಿತ್ತರಿಸುವ ಮೂಲಕ ಜನರಲ್ಲಿ ಕಾನೂನು ಅರಿವು ಮೂಡಿಸುವಲ್ಲಿ ನೆರವಾಗುತ್ತಿದೆ~ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಜಾನಪದ ಸಾಹಿತಿ ಡಾ.ಎಂ.ಎನ್. ವಾಲಿ, `ಆಕಾಶವಾಣಿ ಎಲ್ಲ ವರ್ಗದ ಜನರನ್ನು ಸೆಳೆದುಕೊಂಡಿರುವ ಮಾಧ್ಯಮ. ದೂರದರ್ಶನ ದುರ್ಬಳಕೆಯಾಗುತ್ತಿದ್ದರೆ, ರೇಡಿಯೊ ತನ್ನ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ~ ಎಂದು ಶ್ಲಾಘಿಸಿದರು.

`ವಿಜಾಪುರದ ಎಫ್.ಎಂ. ರೇಡಿಯೊ ಕೇಂದ್ರವನ್ನು ಎ.ಎಂ. ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು. ಈ ಭಾಗದ ಜನಪ್ರತಿನಿಧಿಗಳು ಆ ನಿಟ್ಟಿನಲ್ಲಿ ಶ್ರಮಿಸಬೇಕು. ಈ ಭಾಗದ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಬೇಕು~ ಎಂದು ಮನವಿ ಮಾಡಿದರು.

ವಿಜಾಪುರ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಬಸವರಾಜ ಜಡಿ ಅಧ್ಯಕ್ಷತೆ ವಹಿಸಿದ್ದರು. ತಾಂತ್ರಿಕ ವಿಭಾಗದ ಮುಖ್ಯಸ್ಥ ಕಬೀರ ಲಮಾಣಿ ಮುಖ್ಯ ಅತಿಥಿಯಾಗಿದ್ದರು.

ರೇಷ್ಮಾ ಭಟ್ ಸಂಗಡಿಗರಿಂದ ಸುಗಮ ಸಂಗೀತ, ಡಾ.ಅಶೋಕ ಹುಗ್ಗಣ್ಣವರ ಅವರಿಂದ ಹಿಂದುಸ್ತಾನಿ ಗಾಯನ ಕಾರ್ಯಕ್ರಮ ನಡೆಯಿತು.

ಕ್ಷೇತ್ರ ಪ್ರಚಾರ ಅಧಿಕಾರಿ ಶಿವಯೋಗಿ ಮೇಸ್ತ್ರಿ, ಆಕಾಶವಾಣಿ ಅಧಿಕಾರಿ ಗುರುನಾಥ ಕಡಬೂರ, ಸಾಹಿತಿಗಳಾದ ಮಹಾಂತ ಗುಲಗಂಜಿ, ಸುಭಾಸ ಯಾದವಾಡ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.