ADVERTISEMENT

ವಿಜಾಪುರ: ಸದಾಶಿವ ಆಯೋಗ ವರದಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2012, 5:05 IST
Last Updated 24 ಆಗಸ್ಟ್ 2012, 5:05 IST

ವಿಜಾಪುರ: ಒಳಮೀಸಲಾತಿ ಕುರಿತು ಸದಾಶಿವ ಆಯೋಗ ನೀಡಿರುವ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಬಂಜಾರಾ ಸಮಾಜದವರು ಗುರುವಾರ ನಗರದಲ್ಲಿ ಬ್ರಹತ್ ಪ್ರತಿಭಟನೆ ನಡೆಸಿದರು.

ಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಆಗಮಿಸಿ ಅಂಬೇಡ್ಕರ ಚೌಕ್‌ನಲ್ಲಿ ಬಹಿರಂಗ ಸಭೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

`ರಾಜ್ಯದಲ್ಲಿ 40 ಲಕ್ಷ ಲಂಬಾಣಿ ಜನಸಂಖ್ಯೆ ಇದೆ. ಉಳಿದ ಪರಿಶಿಷ್ಟ ಜಾತಿಯ ಜನಾಂಗಕ್ಕಿಂತ ಲಂಬಾಣಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಊರು ಬಿಟ್ಟು ಪ್ರತ್ಯೇಕ ತಾಂಡಾಗಳಲ್ಲಿ ವಾಸವಾಗಿದ್ದು, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದ್ದಾರೆ. ಶೇ.80 ರಷ್ಟು ಜನ ಗುಳೆ ಹೋಗಿ ಕಷ್ಟಕರ ಜೀವನ ಸಾಗಿಸುತ್ತಿದ್ದಾರೆ~ ಎಂದು ಮಾಜಿ ಶಾಸಕರಾದ ಪ್ರಕಾಶ ರಾಠೋಡ, ಮನೋಹರ ಐನಾಪೂರ, ಜಿ.ಪಂ. ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ಜಿ.ಪಂ. ಮಾಜಿ ಸದಸ್ಯರಾದ ರಾಜಪಾಲ ಚವ್ಹಾಣ, ಮಲ್ಲಿಕಾರ್ಜುನ ನಾಯಕ ಹೇಳಿದರು.

ವಾಸ್ತವ ಸ್ಥಿತಿ ಹೀಗಿರುವಾಗ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಲ್ಲಿ ಲಂಬಾಣಿ ಸಮಾಜವನ್ನು ಕಡೆಗಣಿಸಿದೆ. 101 ಉಪ ಜಾತಿಗಳ ಪೈಕಿ ಶೇ.15ರ ಮೀಸಲಾತಿಯಲ್ಲಿ ಎರಡೇ ಜಾತಿಗೆ ಶೇ.6 ಮತ್ತು ಶೇ.5 ಮೀಸಲಾತಿ ನೀಡಲು ಹಾಗೂ ಉಳಿದ 99 ಉಪ ಜಾತಿಗಳಿಗೆ ಶೇ.3ರಷ್ಟು ಮಾತ್ರ ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದ್ದು ಅನ್ಯಾಯ. ಈ ವರದಿಯನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.


ಈ ಆಯೋಗ ಲಂಬಾಣಿ ತಾಂಡಾಗಳಿಗೆ ಭೇಟಿ ನೀಡಿ ಗಣತಿ ಮಾಡಿಲ್ಲ. ವರದಿ ಅವೈಜ್ಞಾನಿಕತೆಯಿಂದ ಕೂಡಿದೆ. ಸರ್ಕಾರ ಈ ವರದಿಯನ್ನು ಅನುಷ್ಠಾನಕ್ಕೆ ತಂದರೆ ಲಂಬಾಣಿ ಸಮಾಜಕ್ಕೆ ದೊಡ್ಡ ಅನ್ಯಾಯವಾಗಲಿದೆ. ಈಗಿರುವ ಮೀಸಲಾತಿ ವ್ಯವಸ್ಥೆಯನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿದರು.


ಸೇವಾಲಾಲ ಸ್ವಾಮೀಜಿ, ಸೋಮಲಿಂಗ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ದೇವಾನಂದ ಚವ್ಹಾಣ, ಅನುಸೂಯಾ ಜಾಧವ, ಶಂಕರ ಚವ್ಹಾಣ, ಲಕ್ಮಣ ರಾಠೋಡ, ಚಂದ್ರಶೇಖರ ರಾಠೋಡ, ಬಿ.ಬಿ. ನಾಯಕ, ರೂಪಸಿಂಗ ಲೋಣಾರಿ, ಮಾನಸಿಂಗ್ ಜಾಧವ, ಚಿದಾನಂದ ಸೀತಿಮನಿ, ರಾಜು ಜಾಧವ, ಭಾರತಿ ನಾಯಿಕ, ಕಸ್ತೂರಬಾಯಿ ದೊಡಮನಿ ಇತರರು ಪಾಲ್ಗೊಂಡಿದ್ದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.