ADVERTISEMENT

ವ್ಯಕ್ತಿತ್ವ ರೂಪಿಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 19:59 IST
Last Updated 4 ಜೂನ್ 2013, 19:59 IST

ವಿಜಾಪುರ: 'ಸಮರ್ಪಣಾ ಮನೋಭಾವ, ಶ್ರದ್ಧೆ ಮತ್ತು ಪ್ರಾಮಾಣಿಕತೆ ಯಶಸ್ಸಿನ ಕೀಲಿ ಕೈ ಗಳಾಗಿವೆ. ಯಶಸ್ಸಿಗೆ ಯಾವುದೇ ಒಳಮಾರ್ಗ ಇರುವುದಿಲ್ಲ. ಅಡೆ-ತಡೆ ಎದುರಾದರೂ ಎದೆಗುಂದದೆ ಅಂದುಕೊಂಡಿದ್ದನ್ನು ಸಾಧಿಸುವ ಛಲ ನಮ್ಮಲ್ಲಿರಬೇಕು' ಎಂದು ಬೆಂಗಳೂರು ವಾಯು ಸೇನಾ ನೆಲೆಯ ತರಬೇತಿ ವಿಭಾಗದ ಏರ್ ವೈಸ್ ಮಾರ್ಷಲ್ ಪಿ.ಆರ್. ಸಿನ್ಹಾ ಹೇಳಿದರು.

ಇಲ್ಲಿಯ ಸೈನಿಕ ಶಾಲೆಯಲ್ಲಿ ಮಂಗಳವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
'ವಿಜಾಪುರ ಸೈನಿಕ ಶಾಲೆ ಹಲವು ವರ್ಷಗಳಿಂದ ಪ್ರಗತಿ ಸಾಧಿಸುತ್ತಿದೆ. ಅಧ್ಯಯನ, ಆಟೋಟ ಮತ್ತು ತನ್ನ ಕ್ರಿಯಾಶೀಲತೆಯಿಂದ ಸಾಕಷ್ಟು ಹೆಸರುವಾಸಿಯಾಗಿದೆ. ಶಾಲೆಯಲ್ಲಿ ಲಭ್ಯವಿರುವ ಮೂಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು' ಎಂದು ಸೈನಿಕ ಶಾಲೆಯ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಸಿನ್ಹಾ ಸಲಹೆ ನೀಡಿದರು.

'ಸೇನಾ ಶಿಸ್ತಿನ ಶಿಕ್ಷಣ ಪಡೆಯುವ ಸೈನಿಕ ಶಾಲೆಯ ವಿದ್ಯಾರ್ಥಿಗಳು ಪ್ರಾಮಾಣಿಕತೆಯನ್ನು ರೂಢಿಸಿ ಕೊಳ್ಳಬೇಕು. ತಮ್ಮ ಜೀವನದುದ್ದಕ್ಕೂ ಇತರರಿಗೆ ಮಾದರಿಯಾಗಿರಬೇಕು' ಎಂದು ಪ್ರಾಚಾರ್ಯ ಕರ್ನಲ್ ಆರ್. ಬಾಲಾಜಿ ಕಿವಿಮಾತು ಹೇಳಿದರು.

ಶಾಲೆಯ ವಿದ್ಯಾರ್ಥಿನಿಲಯ, ಹಾಲಿನ ಡೇರಿ, ಕುದುರೆ ಲಾಯ, ಈಜುಕೊಳ, ಪ್ರಯೋಗ ಶಾಲೆ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರಗಳಿಗೆ ಏರ್ ವೈಸ್ ಮಾರ್ಷಲ್ ಪಿ.ಆರ್. ಸಿನ್ಹಾ ಭೇಟಿ ನೀಡಿ, ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯೋಪಾಧ್ಯಾಯರಾದ  ಲೆ. ಕರ್ನಲ್ ರಿಷಿರಾಜ್ ಸಿಂಗ್, ಕುಲಸಚಿವ ವಿಂಗ್ ಕಮಾಂಡರ್ ಈ.ಶ್ರೀನಿವಾಸ್, ಹಿರಿಯ ಶಿಕ್ಷಕ ದಾಮೋದರ ಹಾಗೂ ಶಿಕ್ಷಕರು-ಸಿಬ್ಬಂದಿ ಪಾಲ್ಗೊಂಡಿದ್ದರು. ಶಾಲೆಯ ಕ್ಯಾಪ್ಟನ್ ಕೆಡೆಟ್ ಅಶ್ವಥ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.