ADVERTISEMENT

‘ಶೇ 100ರಷ್ಟು ಮತದಾನ ಅಗತ್ಯ’

ಮತಗಟ್ಟೆ ಮಟ್ಟದ ಮುಖ್ಯಸ್ಥರಿಗೆ ಜಾಗೃತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 12:27 IST
Last Updated 10 ಏಪ್ರಿಲ್ 2018, 12:27 IST

ವಿಜಯಪುರ: ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಯಾವುದೇ ಪ್ರಭಾವಕ್ಕೆ ಒಳಗಾಗದೆ, ತಪ್ಪದೇ ಮತದಾನ ಮಾಡುವ ಕುರಿತಂತೆ ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು ಮತಗಟ್ಟೆ ಮಟ್ಟದ ಜಾಗೃತಿ ಮುಖ್ಯಸ್ಥರಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವಿಧಾನಸಭಾ ಚುನಾವಣೆ ಅಂಗವಾಗಿ ಶೇ 100 ರಷ್ಟು ಮತದಾನ ಕುರಿತು ಮತಗಟ್ಟೆ ಮಟ್ಟದ ಮುಖ್ಯಸ್ಥರಿಗೆ ಏರ್ಪಡಿಸಿದ್ದ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಈ ಹಿನ್ನಲೆಯಲ್ಲಿ ಮನೆ ಮನೆಗೆ ತೆರಳಿ ಜಿಲ್ಲೆಯ 4 ಲಕ್ಷಕ್ಕೂ ಮೇಲ್ಪಟ್ಟ ಕುಟುಂಬಗಳಿಗೆ ಮತದಾನ ಮಹತ್ವ ಕುರಿತಂತೆ ಜಾಗೃತಿ ಮೂಡಿಸುವ ಕರಪತ್ರಗಳ ಮೂಲಕ ಅರಿವು ಮೂಡಿಸಬೇಕು. ಪ್ರತಿ ಮನೆ -ಮನೆಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಮುಂದಿನ ವಾರದಿಂದ ಸೂಕ್ತ ಅರಿವು ಮೂಡಿಸಬೇಕು. ಅತೀ ಕಡಿಮೆ ಮತದಾನವಾಗಿರುವ 200 ಮತಗಟ್ಟೆಗಳನ್ನು ಗುರುತಿಸಿದ್ದು, ಆಯಾ ಮತಗಟ್ಟೆಗಳ ವ್ಯಾಪ್ತಿಯಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳ ಮೂಲಕ ಮತದಾನದ ಮಹತ್ವ ಹಾಗೂ ಮತದಾರ ನೋಂದಣಿ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ ಅರ್ಹ ಮತದಾರರು ತಮ್ಮ ಬಳಿ ಎಪಿಕ್ ಕಾರ್ಡ್‌ ಇಲ್ಲದಿದ್ದರೇ ಚುನಾವಣಾ ಆಯೋಗ ನಿಗದಿಪಡಿಸಿದ ಪಾಸ್‌ಪೋರ್ಟ್‌, ಪ್ಯಾನ್‌ಕಾರ್ಡ್‌, ಬ್ಯಾಂಕ್ ಪಾಸ್‌ಬುಕ್‌, ಆಧಾರ ಕಾರ್ಡ್‌, ಪಡಿತರ ಚೀಟಿ, ಸೇವಾ ಗುರುತಿನ ಚೀಟಿ, ಪಿಂಚಣಿ ದಾಖಲೆ, ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಗಿ, ಆಯುಧಗಳ ಪರವಾನಿಗೆ ಪತ್ರ, ಮಾಜಿ ಸೈನಿಕರಿಗೆ ನೀಡಿರುವ ಸಿಎಸ್‌ಡಿ ಕ್ಯಾಂಟಿನ್ ಕಾರ್ಡ್‌ ಇನ್ನಿತರ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದಾಗಿದೆ ಎಂದು ಮತದಾರರಿಗೆ ತಿಳಿಸಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಸಿ.ವಿ.ದಶವಂತ, ಯೋಜನಾ ನಿರ್ದೇಶಕ ಕುಂಬಾರ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ದೇವರಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.