ವಿಜಯಪುರ: ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿಕೊಂಡರೂ ಕೇಂದ್ರ, ರಾಜ್ಯ ಸರ್ಕಾರಗಳು ಸ್ಪಂದಿಸದ ಕಾರಣಕ್ಕೆ, ಸಾಲಬಾಧೆ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿರು ವುದು ವಿಷಾದದ ಸಂಗತಿ ಎಂದು ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ಬಸವನಬಾಗೇವಾಡಿ ತಾಲ್ಲೂಕು ಮಾರ್ಕಬ್ಬಿನಹಳ್ಳಿ ಗ್ರಾಮದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಎಷ್ಟೇ ದುಡಿದರೂ ರೈತರು ಸಾಲ ಮಾಡುವುದು ತಪ್ಪುತ್ತಿಲ್ಲ, ಇದರಿಂದ ಬೇಸತ್ತ ರೈತರು ಕೃಷಿ ಕಾಯಕದಿಂದ ದೂರ ಉಳಿಯುವ ನಿರ್ಧಾರಕ್ಕೆ ಬರುತ್ತಿ ದ್ದಾರೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಆಹಾರ ಉತ್ಪಾದನೆ ಕುಂಠಿತ ಗೊಂಡು, ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯ ಪಡ ಬೇಕಾಗಿಲ್ಲ ಎಂದರು.
ರೈತರು ಕೇವಲ ತಮ್ಮ ಕುಟುಂಬ ರಕ್ಷಣೆಗೆ ಮಾತ್ರ ಆಹಾರ ಬೆಳೆಯಲು ಸಾಲ ಮಾಡುವುದಿಲ್ಲ. ಇಡೀ ದೇಶದ ಜನರಿಗೆ ಆಹಾರ ಒದಗಿಸಿ ಅವರ ಜೀವ ಬದುಕಿಸಲು ಕೃಷಿಗಾಗಿ ಸಾಲ ಮಾಡುತ್ತಾರೆ. ಸಕಾಲಕ್ಕೆ ಮಳೆ ಬರದಿದ್ದರೆ, ಬಿತ್ತಿದ ಫಸಲು ಕೈಗೆ ಬರುವುದಿಲ್ಲ. ಫಸಲು ಬಾರದಿದ್ದರೆ ರೈತರು ಎಲ್ಲಿಂದ ಸಾಲ ತೀರಿಸುತ್ತಾರೆ. ಇಂತಹ ಗಂಭಿರ ಪರಿಸ್ಥಿತಿಯಲ್ಲಿ ಸರ್ಕಾರಗಳು ರೈತರ ಸಾಲ ಮನ್ನಾ ಮಾಡದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮಪ್ಪ ರಂಜಣಗಿ ಮಾತನಾಡಿ ದೇಶದ ಉದ್ದಿಮೆದಾರರ ಸಾಲ ಮನ್ನಾ ಮಾಡುವ ಮನಸ್ಸು ಮಾಡುವ ಕೇಂದ್ರ, ರಾಜ್ಯ ಸರ್ಕಾರಗಳು, ಸಂಕಷ್ಟದಲ್ಲಿರುವ ರೈತನ ನೆರವಿಗಾಗಿ ಸಾಲ ಮನ್ನಾ ಮಾಡುವ ಮನಸ್ಸು ಮಾಡುತ್ತಿಲ್ಲ. ಕೋಟಿ ಕೋಟಿ ಸಾಲ ಪಡೆದ ಉದ್ದಿಮೆದಾರರಿಗೆ ನೋಟಿಸ್ ನೀಡದ ಬ್ಯಾಂಕ್ಗಳು, ರೈತನ ಸಾಲ ಮರು ಪಾವತಿಗಾಗಿ ನೋಟಿಸ್ ನೀಡುವುದು ಸರಿಯಲ್ಲ ಎಂದರು.
ವಂದಾಲ ಮಠದ ಮಡಿವಾಳಯ್ಯ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಎಂ.ಆರ್ .ಪಾಟೀಲ, ಗೌಡಪ್ಪಗೌಡ ಮೈಗೂರ, ರಮೇಶ ರಾಠೋಡ, ಗಿರೀಶ ಹಿರೇಮಠ, ಡಾ.ಎಂ.ರಾಮಚಂದ್ರ ಬೊಮ್ಮನ ಜೋಗಿ, ಸಿದ್ರಾಮ ಅಂಗಡಗೇರಿ, ಎಂ.ಡಿ.ಕೋಣಶಿರಸಗಿ, ಅಪ್ಪಾಸಾಹೇಬ ಲಕ್ಷ್ಯಾನಟ್ಟಿ, ಕುಮಾರ ಬೆಕಿನಾಳ, ಶರಣ ಗೌಡ ಪಾಟೀಲ, ರಮೇಶ ಹಡಪದ, ಬಂದಗೀಸಾಬ ಮುಲ್ಲಾ ಇದ್ದರು.
ಕಲ್ಲಪ್ಪ ರೂಗಿ ನಿರೂಪಿಸಿದರು. ಕುಮಾರಗೌಡ ಪಾಟೀಲ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.