ನಿಡಗುಂದಿ: ಸುಟ್ಟ ವಿದ್ಯುತ್ ಟ್ರಾನ್ಸ್ಫಾರ್ಮರ್ ಕೂಡಿಸಿದ್ದನ್ನು ಖಂಡಿಸಿ, ಹೊಸ ಟಿ.ಸಿ ಕೂಡಿಸುವ ವರೆಗೂ ವಿದ್ಯುತ್ ಟ್ರಾನ್ಸ್ಫಾರ್ಮರ್ ಮೇಲೆಯೇ ಕುಳಿತು ರೈತರು ಇಲ್ಲಿ ಮಂಗಳವಾರ ಪ್ರತಿಭಟಿಸಿದರು.
ಪಟ್ಟಣದ ಹೊರವಲಯದ ಅಡಕಲಗುಂಡಪ್ಪ ದೇವಸ್ಥಾನ ಸಮೀಪ ರೈತರ ಜಮೀನಿನಲ್ಲಿ ಕಳೆದ ಫೆ. 28 ರಂದು ಸುಟ್ಟಿದ್ದ ಟಿಸಿ, ಬದಲಾಯಿಸಿ ಮತ್ತೇ ಸುಟ್ಟ ಟಿಸಿಯನ್ನೇ ಕೂಡಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಪ್ರತಿಭಟಿಸಿದರು. ಈ ಟಿಸಿಯ ಮೂಲಕ 8 ಜನ ರೈತರ 100 ಎಕರೆಗೂ ಹೆಚ್ಚಿನ ಜಮೀನಿಗೆ ವಿದ್ಯುತ್ ಪೂರೈಕೆಯಾಗುತ್ತದೆ.
ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಆಲೂರ ಹಾಗೂ ವೆಂಕಟೇಶ ಬಂಡಿವಡ್ಡರ ಟಿಸಿ ಮೇಲೆ ಕುಳಿತು ಪ್ರತಿಭಟನೆ ಆರಂಭಿಸಿದರು.
ಸ್ಥಳಕ್ಕೆ ಬಂದ ಹೆಸ್ಕಾಂ ಶಾಖಾಧಿಕಾರಿ ಶಾಂತು ಹಾವರಗಿ ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದರು. ಮಂಗಳವಾರವೇ ಟಿಸಿ ಕೂಡಿಸುತ್ತೇವೆ ಎಂದು ಮನವಿ ಮಾಡಿದರೂ ಹೋರಾಟಗಾರರು ಮಣಿಯಲಿಲ್ಲ.
ಕೊನೆಗೆ ಎರಡು ಗಂಟೆಯೊಳಗೇ ಬೇರೆ ಟಿಸಿ ತರಿಸಿದ ನಂತರವೇ ಟಿಸಿ ಮೇಲೆ ಕುಳಿತ ಪ್ರತಿಭಟನಾ ಕಾರರು ಕೆಳಕ್ಕೆ ಇಳಿದರು.
ಲಿಂಗರಾಜ ಆಲೂರ, ಗೋಪಾಲ ಬಂಡಿ ವಡ್ಡರ, ಶಿವಪ್ಪ ಪಾಟೀಲ, ರಾಮಸ್ವಾಮಿ ಬಂಡಿವಡ್ಡರ, ಮೋಸಿಸಾಬ್ ಬಾಣಕಾರ, ವೀರಭದ್ರಯ್ಯ ಗಣಾಚಾರಿ, ಈರಪ್ಪ ಶೆಟ್ಟರ, ಚನ್ನಬಸು ಹುಂಡೇಕಾರ, ಶಿವಯ್ಯ ಗಣಾಚಾರಿ, ಅಶೋಕ ಬಡಿಗೇರ, ಕೃಷ್ಣಪ್ಪ ಬಂಡಿವಡ್ಡರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.