ADVERTISEMENT

ಹುಟ್ಟೂರಿನಲ್ಲಿ ಸಾಧಕ ಕಿರಣಗೆ ಸನ್ಮಾನ

ದೇವರ ಹಿಪ್ಪರಗಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ 779ನೇ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 4 ಮೇ 2018, 12:48 IST
Last Updated 4 ಮೇ 2018, 12:48 IST

ದೇವರ ಹಿಪ್ಪರಗಿ: ವಿದ್ಯೆ, ಕಲಿಯುವವರ, ಪರಿಶ್ರಮಿಗಳ ಸ್ವತ್ತು ಎಂಬುವುದಕ್ಕೆ ಯು.ಪಿ.ಎಸ್.ಸಿ ಸಾಧಕ ಕಿರಣ ಚವ್ಹಾಣನ ಸಾಧನೆ ಸಾಕ್ಷಿಯಾಗಿದೆ ಎಂದು ಹಿರಿಯ ವೈದ್ಯ ಆರ್.ಆರ್.ನಾಯಿಕ ಹೇಳಿದರು.

ಪಟ್ಟಣದ ಕೃಪಾ ವಿವಿಧೋದ್ದೇಶಗಳ ಸಹಕಾರಿ ಸಂಘದ ಅಡಿಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಂಗವಾಗಿ 2018ನೇ ಸಾಲಿನ ಯು.ಪಿ.ಎಸ್.ಸಿ ಅಂತಿಮ ಪರೀಕ್ಷೆಯಲ್ಲಿ ಆಯ್ಕೆಯಾದ ದೇವರ ಹಿಪ್ಪರಗಿ ತಾಂಡಾದ ಕಿರಣ ಗಂಗಾರಾಮ ಚವ್ಹಾಣ ಅವರನ್ನು ಸತ್ಕರಿಸಿ ಮಾತನಾಡಿದರು.

‘ಪ್ರತಿಭೆಗೆ ಯಾವುದು ಅಡ್ಡಿಯಾಗದು ಎಂಬುವುದಕ್ಕೆ ಕಿರಣ ಅತ್ಯುತ್ತಮ ಉದಾಹರಣೆ.ತಾಂಡಾದ ಬಡ ಕುಟುಂಬದಲ್ಲಿ ಜನಿಸಿ ತನ್ನ ಅವಿರತ ಶ್ರಮ, ಶ್ರದ್ಧೆ, ಪ್ರತಿಭೆಯಿಂದ ಯು.ಪಿ.ಎಸ್.ಸಿ.ಪರೀಕ್ಷೆಯಲ್ಲಿ 779ನೇ ರ‍್ಯಾಂಕ್ ಗಳಿಸಿ ಪಟ್ಟಣ ಸೇರಿದಂತೆ ಇಡೀ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾನೆ ಇಂಥ ಪ್ರತಿಭೆಯನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ADVERTISEMENT

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಿರಣ ಚವ್ಹಾಣ, ‘ಹುಟ್ಟೂರಿನಲ್ಲಿ ನನ್ನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿರುವುದು ಅತ್ಯಂತ ಸಂತೋಷದ ವಿಷಯ.  ಈ ಸನ್ಮಾನ ನನಗೆ ಹೆಚ್ಚಿನ ಸ್ಫೂರ್ತಿ, ಜವಾಬ್ದಾರಿ ನೀಡಿದೆ ಇದನ್ನು ನಾನೆಂದು ಮರೆಯಲಾರೆ ಎಂದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಸೋಮನಗೌಡ ಪಾಟೀಲ, ಉಪಾಧ್ಯಕ್ಷ ಬಾಬುಗೌಡ ಬಿರಾದಾರ, ನಿರ್ದೇಶಕರಾದ ರೇವಣಸಿದ್ದಯ್ಯ ಮಠ, ಕಾಶೀನಾಥ ಸಾಲಕ್ಕಿ, ಮಹಾರುದ್ರ ಕಕ್ಕಳಮೇಲಿ, ಶಿವರಾಯ ಚವ್ಹಾಣ, ಮಡಿವಾಳಪ್ಪ ಕುಂಬಾರ, ನಿಂಗನಗೌಡ ಬಿರಾದಾರ, ಸಿಬ್ಬಂದಿ ವಿನೋದ ಬಿರಾದಾರ, ಅರುಣ ಮಣೂರ, ಶಂಕರಗೌಡ ಬಿರಾದಾರ, ರವೀಂದ್ರ ವಡ್ಡೋಡಗಿ, ಹಣಮಂತ ಮೋರಟಗಿ, ಗಿರೀಶ ಅವಟಿ ಇದ್ದರು.

**
ನನ್ನೆಲ್ಲಾ ಸಾಧನೆ ಹಿಂದೆ ತಂದೆ, ತಾಯಿ, ಅಣ್ಣ ಹಾಗೂ ಗುರುವೃಂದದ ಪರಿಶ್ರಮವಿದ್ದು, ಈ ಗೌರವದಲ್ಲಿ ಅವರಿಗೂ ಪಾಲಿದೆ
– ಕಿರಣ ಚವ್ಹಾಣ, ಸಾಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.