ವಿಜಾಪುರ: ಮೂಡುಬಿದಿರೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಕನ್ನಡ ನಾಡು ನುಡಿ ಸಂಸ್ಕೃತಿಯ ವಿಶ್ವ ಸಮ್ಮೇಳನ ‘ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್-2013’ ಇದೇ 19 ರಿಂದ 22 ರವರೆಗೆ ನಡೆಯಲಿದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಪ್ರೊ.ಕುರಿಯನ್ ಹೇಳಿದರು.
ಪ್ರತಿ ದಿನ ಒಂದೂವರೆ ಲಕ್ಷ ಜನ ಪಾಲ್ಗೊಳ್ಳಲಿದ್ದು, 50 ಸಾವಿರ ಪ್ರತಿ ನಿಧಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗು ತ್ತಿದೆ. ಒಟ್ಟಾರೆ ಸಮ್ಮೇಳನಕ್ಕೆ ₨20 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಬುಧವಾರ ಇಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. 80 ಎಕರೆ ವಿಶಾಲವಾದ ಮೈದಾನ ದಲ್ಲಿ ನಡೆಯುವ ನಾಲ್ಕು ದಿನಗಳ ಈ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿವೆ. ಸಮ್ಮೇಳನದಲ್ಲಿ ಭಾಗವಹಿ ಸುವವರಿಗೆ ದಕ್ಷಿಣ ಕನ್ನಡ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಮ್ಮೇಳನದಲ್ಲಿ ಮೂರು ಗೋಷ್ಠಿಗಳು, ನಾಲ್ಕು ವಿಚಾರ ಗೋಷ್ಠಿಗಳು, ವಿಶೇಷ ಉಪನ್ಯಾಸ, ಸಂಸ್ಮರಣೆ, ಕವಿಸಮಯ, ಮಾತಿನ ಮಂಟಪ, ನಾಡು-ನುಡಿಗಾಗಿ ಸೇವೆ ಸಲ್ಲಿಸಿದವರಿಗೆ ಗೌರವ ಸನ್ಮಾನ, ಪ್ರತಿದಿನ ಸಂಜೆ 6ರ ಬಳಿಕ ಒಂಬತ್ತು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಇದೇ 20 ರಿಂದ 22ರ ವರೆಗೆ ಸಮಾನಾಂತರ ವೇದಿಕೆಗಳಲ್ಲಿ ಕೃಷಿಸಿರಿ, ಜನಪದ ಸಿರಿ ಮತ್ತು ವಿದ್ಯಾರ್ಥಿ ಸಿರಿ ಸಮ್ಮೇಳನಗಳು ನಡೆಯಲಿವೆ ಎಂದು ವಿವರಿಸಿದರು.
ಯತಿರಾಜ ಶೆಟ್ಟಿ, ಸಂಧ್ಯಾ, ಮಂಜುಶ್ರೀ, ಆಳ್ವಾಸ್ ನುಡಿಸಿರಿ ವಿರಾಸತ್ ವಿಜಾಪುರ ಘಟಕದ ಅಧ್ಯಕ್ಷ ಡಾ.ಬಾಬು ನಾಗೂರ, ಕಾರ್ಯದರ್ಶಿ ರಾಜೇಂದ್ರ ಗೂಗವಾಡ, ಬಸವರಾಜ ಮಜ್ಜಗಿ ಇತರರು ಪತ್ರಿಕಾ ಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.