ADVERTISEMENT

‘ಬಡವರಿಗೆ ಶಿಕ್ಷಣ ನೀಡಿದ ಹಿಪ್ಪರಗಿ ಸೇವೆ ಅಪಾರ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 5:39 IST
Last Updated 17 ಡಿಸೆಂಬರ್ 2013, 5:39 IST

ಮುದ್ದೇಬಿಹಾಳ: ವಿಶ್ವವಿದ್ಯಾಲಯದ ಕುಲಪತಿಗಳಾಗುವ ಅರ್ಹತೆ ಇದ್ದರೂ ಸಹ ಅದನ್ನು ನಿರಾಕರಿಸಿ ಬಡ ಮಕ್ಕಳಿಗೆ ಶಿಕ್ಷಣ ನೀಡುವ ನಿರ್ಧಾರ ಕೈಕೊಂಡ ಪ್ರಾಧ್ಯಾಪಕ ಎ.ಎಸ್.ಹಿಪ್ಪರಗಿಯವರ ತ್ಯಾಗ ಮನೋಭಾವ ದೊಡ್ಡದು ಎಂದು ಕಮ್ಯುನಿಸ್ಟ್‌ ಪಕ್ಷದ ಡಾ.ಸಿದ್ದನಗೌಡ ಪಾಟೀಲ ಹೇಳಿದರು.

ಅವರು ತಾಲ್ಲೂಕಿನ ಢವಳಗಿ ಗ್ರಾಮ ದಲ್ಲಿ ಭಾನುವಾರ ನಡೆದ ಪ್ರಾಧ್ಯಾಪಕ ದಿ.ಎ.ಎಸ್.ಹಿಪ್ಪರಗಿ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈಗ್ಗೆ ಐವತ್ತು ವರ್ಷಗಳ ಹಿಂದೆ ಶಿಕ್ಷಣ ಎನ್ನುವುದು ಬಡವರ ಪಾಲಿಗೆ ಗಗನಕುಸುಮವಾಗಿತ್ತು. ಬಡತನ ದಲ್ಲಿಯೇ ಹುಟ್ಟಿದ್ದ ಎ.ಎಸ್.ಹಿಪ್ಪರಗಿ ಅವರಿಗೆ ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದು ಬೇಕಾಗಿತ್ತು. ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೋಗಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಕೀರ್ತಿ, ಹಣ ಎಲ್ಲ ಗಳಿಸಬಹುದಿತ್ತು, ಅದನ್ನು ಬಿಟ್ಟು ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಗಳ ಬದುಕು ಕಟ್ಟುವ ಕೆಲಸಕ್ಕೆ ನಿಂತ ಅವರ ದೊಡ್ಡ ಗುಣ ಯಾರಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾ.ಎ.ಎಸ್.ಹಿಪ್ಪರಗಿ ಪ್ರತಿಷ್ಠಾನದ ಗೌರವಾಧ್ಯಕ್ಷ ಬಿ.ಎಸ್.ಪಾಟೀಲ ಸಾಸನೂರ, ಹಿಪ್ಪರಗಿ ಅವರ ಸರಳತೆ, ಪ್ರಾಮಾಣಿಕತೆ, ಗ್ರಾಮೀಣ ಪ್ರದೇಶ ದಲ್ಲಿಯೇ ಇದ್ದುಕೊಂಡು ಗಟ್ಟಿ ಮುಟ್ಟಾದ ತಳಪಾಯದ ಶಿಕ್ಷಣ ನೀಡಿ ದರು. ತಮ್ಮಂತೆಯೇ ಸರಳತೆ ಸಾರುವ ಸಾವಿರಾರು ಶಿಷ್ಯರನ್ನು  ಅವರು ತಯಾರಿಸಿದರು  ಎಂದು ಹೇಳಿದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ವಿಜಾಪುರ ಜ್ಞಾನಯೋಗಾಶ್ರಮದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಆಶೀ ರ್ವಚನ ನೀಡಿದರು. ಮಡಿವಾ ಳೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ,  ಪ್ರಗತಿಪರ ರೈತ ವೆಂಕಪ್ಪ ಕೊಣ್ಣೂರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಹಾಂತ ಗುಲಗಂಜಿ, ಎಂ.ಎನ್.ಹೆರಲಗಿ, ಭೋಜಣ್ಣ ಬೀಳಗಿ, ಬಿ.ಎಸ್.ಸಾರಂಗ ಮಠ, ವಿ.ಸಿ.ನಾಗಠಾಣ, ಡಾ.ಪ್ರಭು ಗೌಡ ಪಾಟೀಲ, ಎಂ.ಎಂ.ಬ್ಯಾಲಾಳ, ಡಾ.ವಿ.ಡಿ.ಐಹೊಳ್ಳಿ, ಶಂಭು ಸಿದ್ದಪ್ಪ ತುಪ್ಪದ, ಎಸ್.ಎಂ. ತೊಗರಿ, ಎಂ.ಜಿ. ಯಾದವಾಡ, ಡಾ.ರೇಖಾ ಪಾಟೀಲ, ಅಂಕಣಕಾರ ಸುಭಾಸ ಯಾದವಾಡ ಮೊದಲಾದವರಿದ್ದರು.

ಇದಕ್ಕೂ ಮೊದಲು ಈಚೆಗೆ ನಿಧನರಾದ ನೆಲ್ಸನ್‌ ಮಂಡೇಲಾ, ಶ್ರೀಕಂಠದತ್ತ ನರಸಿಂಹರಾಜ ಒಡೆ ಯರ, ಎನ್.ಬಸವರಾಧ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಎ.ಎಸ್. ಕಂಚ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಂ.ಸಜ್ಜನ ಸ್ವಾಗ ತಿಸಿದರು. ಎಸ್.ಆರ್.ಸುಲ್ಫಿ ನಿರೂಪಿಸಿ ದರು. ಬಿ.ಕೆ.ಗೋಟ್ಯಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.