ಚಡಚಣ: ಇತ್ತೀಚೆಗೆ ಚಡಚಣ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆ ಮತ್ತು ಬಿರುಗಾಳಿಗೆ ನಷ್ಟವಾದ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭಾನುವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥೆ, ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ವಸುಧಾ ಮಿಶ್ರಾ, ಸದಸ್ಯರಾದ ಕೇಂದ್ರ ಕೃಷಿ ಮತ್ತು ಸಹಕಾರ ಇಲಾಖೆಯ ಉಪ ಆಯುಕ್ತ ಡಾ. ಪಿ.ಕೆ. ಶಹಾ, ರಾಜ್ಯ ಕೃಷಿ ಇಲಾಖೆಯ ಉಪನಿರ್ದೇಶಕಿ ಡಾ. ಸುಮಾ ಅವರು ಹತ್ತಳ್ಳಿ ಗ್ರಾಮದ ಬೆಳೆ ಹಾನಿಗೀಡಾದ ತೋಟಗಳಿಗೆ ಭೇಟಿ ನೀಡಿ, ಸಂತ್ರಸ್ತ ರೈತರೊಂದಿಗೆ ಚರ್ಚೆ ನಡೆಸಿದರು. ಜಿಲ್ಲಾಧಿಕಾರಿ ರಿತ್ವಿಕ್ ರಂಜನ್ ಪಾಂಡೆ ಹಾನಿ ಕುರಿತು ವಿವರಿಸಿದರು.
ನಂತರ ಹೊಳೆ ಸಂಖ ಗ್ರಾಮದ ವಿಠ್ಠಲ ಬಾಲಗಾಂವ ಅವರ ದ್ರಾಕ್ಷಿ ತೋಟ, ಮನೂಕ್ ಶೆಡ್ ವೀಕ್ಷಿಸಿದರು. ಹತ್ತಳ್ಳಿಯ ಅಪ್ಪಾರಾಯ ಬಿರಾದಾರ ಅವರ ಹಾಳಾದ ದಾಳಿಂಬೆ ಗದ್ದೆ, ಮೆಕ್ಕೆಜೋಳ ಗುನ್ನಪ್ಪ ಬಿರಾದಾರ ಅವರ ಕಬ್ಬು, ಮೆಕ್ಕೆಜೋಳದ ಹೊಲ, ಲಿಂಬು ತೋಟಗಳಲ್ಲಿ ಆಗಿರುವ ಬೆಳೆ ಹಾನಿಯನ್ನು ಪರಿಶೀಲಿಸಿದರು. ಅಧ್ಯಯನ ತಂಡಕ್ಕೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣ, ಸಹಾಯಕ ನಿರ್ದೇಶಕ ಎಚ್.ಎಸ್. ಪಾಟೀಲ ಹಾನಿ ಕುರಿತು ಮಾಹಿತಿ ನೀಡಿದರು.
ಜಿ.ಪಂ. ಸದಸ್ಯ ಶ್ರೀಶೈಲಗೌಡ ಬಿರಾದಾರ, ಈ ಭಾಗದಲ್ಲಿ ಮೂರು ವರ್ಷಗಳ ಹಿಂದೆ ಸುರಿದ ಮಹಾ ಮಳೆಗೆ ಹಾನಿಗೊಳಗಾದ ಮನೆಗಳಿಗೆ ಸರ್ಕಾರ ₨ 37 ಸಾವಿರ ಪರಿಹಾರ ನೀಡಿದೆ. ಆದರೆ ಹತ್ತಳ್ಳಿ ಹಾಗೂ ಹೊಳೆಸಂಖ ಗ್ರಾಮದಲ್ಲಿ ಈಚೆಗೆ ಸುರಿದ ಮಳೆಯಲ್ಲಿ ಹಾನಿಗೀಡಾದ ಮನೆಗಳಿಗೆ ಕೇವಲ ₨ 2300 ವಿತರಿಸಿದೆ. ಇದು ತೀರಾ ಕಡಿಮೆಯಾಯಿತು. ಬೆಳೆ ಹಾನಿ ಅನುಭವಿಸಿದ ರೈತರ ಪ್ರತಿ ಎಕರೆಗೆ ಕನಿಷ್ಠ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಅಧ್ಯಯನ ತಂಡಕ್ಕೆ ಮನವಿ ಮಾಡಿದರು.
ಜಿ.ಪಂ. ಸಿಇಒ ಶಿವಕುಮಾರ, ಉಪ ವಿಭಾಗಾಧಿಕಾರಿ ಕೃಷ್ಣೇಗೌಡ ತಾಯಣ್ಣವರ, ತಹಶೀಲ್ದಾರ್ ತುಕಾರಾಮ ಕಲ್ಯಾಣಕರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಮದಾರ, ಹಿರಿಯ ಸಹಾಯಕ ನಿರ್ದೇಶಕ ಸಿ.ಬಿ.ಪಾಟೀಲ, ಸಹಾಯಕ ಅಧಿಕಾರಿಗಳಾದ ಎಚ್.ಎಸ್. ಪಾಟೀಲ, ಗುರುನಾಥ ಪಾಟೀಲ, ಮುಖಂಡರಾದ ಸಿದ್ದಣ್ಣಗೌಡ ಬಿರಾದಾರ, ಶ್ರೀಶೈಲ ಮೋಸಲಗಿ, ಗ್ರಾ.ಪಂ. ಅಧ್ಯಕ್ಷ ಭೀಮಾಶಂಕರ ಬಿರಾದಾರ, ಗ್ರಾ.ಪಂ. ಮಾಜಿ ಅಧ್ಯಕ್ಷ ರಮೇಶ ಬಿರಾದಾರ, ಜಗದೇವ ಬಿರಾದಾರ, ಬಸವರಾಜ ಬಿರಾದಾರ, ಅಶೋಕ ಬೋರಗಿ ,ರಮೇಶ ಬಿರಾದಾರ, ಖಾಜೂ ಶೇಖ ಉಪಸ್ಥಿತರಿದ್ದರು.
‘ಪರಿಹಾರ ನೀಡಿ, ಇಲ್ಲಾ ವಿಷ ಕೊಡಿ’
‘ಈಚೆಗೆ ಸುರಿದ ಆಲಿಕಲ್ಲು ಮಳೀಗೆ ಮನಿ ಪತ್ರಾಸ್ ಹಾರಿ ಹೋಗ್ಯಾವ ಬಹಳ ನಷ್ಟವಾಗಿದೆ. ಮನೆ– ಮಠ ಕಳೆದುಕೊಂಡು ಬೀದಿಗೆ ಬಂದೀವಿ. ಹಾನಿಯಾದ ಮನೀಗೆ 2300 ರೂಪಾಯಿ ಪರಿಹಾರ ಕೊಟ್ಟಾರ. ಇದು ಯಾವುದಕ್ಕೂ ಸಾಕಾಗಲ್ಲ. ಪರಿಹಾರ ಕೊಡ್ರಿ ಇಲ್ಲಾಂದ್ರ ವಿಷ ಕೊಡ್ರಿ...’
ಇದು ಹತ್ತಳ್ಳಿ ಗ್ರಾಮದ ಮಹಿಳೆಯರು ಭಾನುವಾರ ಕೇಂದ್ರ ಅಧ್ಯಯನ ತಂಡದ ಎದುರು ತಮ್ಮ ಅಳಲು ತೋಡಿಕೊಂಡ ಪರಿ.
ಪರಿಹಾರ ರೂಪವಾಗಿ ರಾಜ್ಯ ಸರ್ಕಾರ ಕೊಟ್ಟಿರುವ ಹಣದಲ್ಲಿ ಎರಡು ಪತ್ರಾಸ್ ಕೊಳ್ಳುವುದಕ್ಕೂ ಸಾಧ್ಯವಿಲ್ಲ. ಮನೆಗೆ ಸೂರು ಹಾಕಿಕೊಳ್ಳಲು ಕನಿಷ್ಠ ಹತ್ತು ಸಾವಿರ ರೂಪಾಯಿ ಬೇಕು. ಈಗಾಗಲೇ ಬೆಳೆ ಹಾನಿಯಿಂದ ರೈತರು, ಗ್ರಾಮಸ್ಥರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಸಮಸ್ಯೆ ಪರಿಹರಿಸುವ ಮಟ್ಟಿಗಾದರೂ ಪರಿಹಾರ ನೀಡದಿದ್ದರೆ ತೊಂದರೆಯಾಗುವುದು. ಸಾಮೂಹಿಕ ಆತ್ಮಹತ್ಯೆಯೊಂದೇ ಮುಂದಿನ ಹಾದಿ ಎಂದು ಆತಂಕ ವ್ಯಕ್ತಪಡಿಸಿದರು.
ಸಂತ್ರಸ್ತ ಮಹಿಳೆಯರೊಂದಿಗೆ ಮಾತನಾಡಿದ ತಂಡದ ಮುಖ್ಯಸ್ಥೆ ಡಾ. ವಸುಧಾ ಮಿಶ್ರಾ, ‘ನಾವು ಪರಿಹಾರ ನೀಡುವವರಲ್ಲ. ಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಮುಂದಿನ ವಿಚಾರ ಸರ್ಕಾರಕ್ಕೆ ಬಿಟ್ಟಿದ್ದು’ ಎಂದರು.
‘ನಮ್ಮೂರಿಗೂ ಬನ್ನಿ ಮೇಡಂ...’
‘ನಮ್ಮೂರಿನಲ್ಲೂ ಆಲಿಕಲ್ಲು ಮಳೆಗೆ ನೂರಾರು ಮನೆಗಳು ಹಾನಿಯಾಗಿವೆ. ಬೆಳೆದು ಕಾಟಾವಿಗೆ ಬಂದ ದ್ರಾಕ್ಷಿ, ದಾಳಿಂಬೆ, ಕಬ್ಬು, ಗೋಧಿ, ಕಡಲೆ ಬೆಳೆಗಳು ಹಾಳಾಗಿ ನಷ್ಟವಾಗಿದೆ. ಹತ್ತಳ್ಳಿಯಲ್ಲಿ ಮಾತ್ರ ಹಾನಿಯಾಗಿಲ್ಲ, ನಮ್ಮೂರಲ್ಲೂ ಹಾಳಾಗಿದೆ... ನಮ್ಮೂರಿಗೂ ಬನ್ನಿ ಮೇಡಂ...’ ಎಂದು ಹೊಳಿಸಂಖ ಗ್ರಾಮಸ್ಥರು ಅಧ್ಯಯನ ತಂಡದ ವಾಹನದ ಅಡ್ಡಗಟ್ಟಿ ನಿಲ್ಲಿಸಿ, ಮನವಿ ಸಲ್ಲಿಸಿದರು.
ಹತ್ತಳ್ಳಿ ಗ್ರಾಮದ ಸರಹದ್ದಿನಲ್ಲಿ ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳ ವಾಹನ ನಿಲ್ಲಿಸಿ ಮನವಿ ಮಾಡಿದ ಹೊಳಿಸಂಖ ಗ್ರಾಮಸ್ಥರು ತಮ್ಮ ಸಮಸ್ಯೆಯನ್ನು ವಿವರಿಸಿದರು.
ರೈತ ಅಶೋಕ ಬೊರಗಿ ಮಾತನಾಡಿ, ಅಪಾರ ನಷ್ಟ ಸಂಭವಿಸಿ ತೊಂದರೆ ಅನುಭವಿಸಿದ್ದರೂ ಯಾವ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ. ಸರಿಯಾದ ಸಮೀಕ್ಷೆಯೂ ನಡೆದಿಲ್ಲ. ತಾವಾದರೂ ಬನ್ನಿ ಎಂದರು.
ರೈತರ ಮನವಿಗೆ ಸ್ಪಂದಿಸದ ಅಧ್ಯಯನ ತಂಡ ಪೊಲೀಸರ ನೆರವಿನೊಂದಿಗೆ ಅಲ್ಲಿಂದ ಚಡಚಣದತ್ತ ಪ್ರಯಾಣ ಬೆಳೆಸಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಶ್ರೀಮಂತ ಉಮರಾಣಿ, ಸದಾಶಿವ ಬಗಲಿ, ಅಶೋಕ ಬಿರಾದಾರ, ಚಿದಾನಂದ ಬೋರಗಿ, ಬೀರಪ್ಪ ವಾಘಮೋರೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.