ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಂದ ಆರಂಭವಾದ ಮಳೆ ಶನಿವಾರ ದಿನವಿಡೀ ಬಿಟ್ಟು ಬಿಡದೆ ವ್ಯಾಪಕವಾಗಿ ಸುರಿದಿದೆ. ಜಿಲ್ಲೆಯಲ್ಲಿ ಒಟ್ಟು 34.58 ಮಿ.ಮೀ.ಮಳೆ ದಾಖಲಾಗಿದೆ.
ಭಾರೀ ಮಳೆಯ ಪರಿಣಾಮ ಸಿಂದಗಿಯಲ್ಲಿ ಎರಡು ಕುರಿ ಮತ್ತು ಒಂದು ಎತ್ತು ಹಾಗೂ ಮುದ್ದೇಬಿಹಾಳದಲ್ಲಿ ಒಂದು ಆಡು ಸಾವಿಗೀಡಾಗಿದೆ ಹಾಗೂ ಜಿಲ್ಲೆಯಲ್ಲಿ ಒಟ್ಟು 135 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ತಿಳಿಸಿದ್ದಾರೆ.
ಶನಿವಾರ ಮತ್ತು ಭಾನುವಾರ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ಜಿಲ್ಲೆಯಲ್ಲಿ ಯೆಲ್ಲೊ ಅಲರ್ಟ್ ಘೋಷಿಸಿತ್ತು.
ಶನಿವಾರ ರಾತ್ರಿ 7 ಗಂಟೆಯಿಂದ ಗುಡುಗು, ಮಿಂಚಿನೊಂದಿಗೆ ನಿಧಾನವಾಗಿ ಆರಂಭವಾದ ಮಳೆ ರಾತ್ರಿಯಿಡೀ ಧಾರಾಕಾರವಾಗಿ ಸುರಿತು. ಶನಿವಾರ ದಿನಪೂರ್ತಿ ಆಗಸದಲ್ಲಿ ಮೋಡಗಳು ದಟ್ಟೈಸಿದ್ದವು. ಆಗಾಗ ಬಿರುಸು, ಆಗಾಗ ತುಂತುರು ಮಳೆ ಸುರಿದ ಪರಿಣಾಮ ಜನ ಮನೆಬಿಟ್ಟು ಹೊರಬರದಂತೆ ನಿರ್ಬಂಧ ವಿಧಿಸಿತ್ತು. ಸೂರ್ಯನ ದರ್ಶನವಿಲ್ಲದೇದಿನವಿಡೀ ಶೀತಮಯ ವಾತಾವರಣ ನಿರ್ಮಾಣವಾಗಿತ್ತು.
ಮಳೆಯಿಂದ ಬಹುತೇಕ ಹೊಲಗಳಲ್ಲಿ ಹಾಗೂ ತಗ್ಗು ಪ್ರದೇಶದಲ್ಲಿ ನೀರು ನಿಂತಿರುವುದು ಕಂಡುಬಂದಿತು. ಚರಂಡಿ, ಹಳ್ಳಗಳು ತುಂಬಿ ಹರಿದವು. ತಾಳಿಕೋಟೆ–ಹಡಗಿನಾಳ ನೆಲಮಟ್ಟದ ಸೇತುವೆ ಮೇಲೆ ಡೋಣಿ ನದಿ ಉಕ್ಕಿ ಹರಿದ ಪರಿಣಾಮ ಈ ಮಾರ್ಗದಲ್ಲಿ ಸಂಚಾರ ಸ್ಥಗಿತವಾಗಿತ್ತು.
ಭಾರೀ ಮಳೆಯಿಂದಾಗಿ ಹೊಲಗಳಲ್ಲಿ ನೀರು ನಿಂತಿರುವುದರಿಂದ ಬೆಳೆಗೆ ಅನಾನುಕೂಲವಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಆಲಮೇಲದಲ್ಲಿ ದಾಖಲೆ ಮಳೆ:ಜಿಲ್ಲೆಯ ಆಲಮೇಲದಲ್ಲಿ ಒಂದೇ ದಿನ 79.5 ಮಿ.ಮೀ ಮಳೆ ದಾಖಲಾಗಿದೆ. ಉಳಿದಂತೆವಿಜಯಪುರ 53.4, ನಾಗರಾಠ 6.3, ಭೂತನಬಾಳ 28.8, ಹಿಟ್ನಳ್ಳಿ 60.6, ಮಮದಾಪುರ 25.2, ಬಬಲೇಶ್ವರ 26.8, ಕುಮಟಗಿ 31.4, ತಿಕೋಟಾ 25.2, ಕನ್ನೂರು 8.3, ಬಾಗೇವಾಡಿ 44.2, ಮನಗೂಳಿ55, ಹೂವಿನ ಹಿಪ್ಪರಗಿ 64.8, ಆಲಮಟ್ಟಿ 27, ಅರೇಶಂಕರ 36.6,ಮುದ್ದೇಬಿಹಾಳ 43, ನಾಲತವಾಡ 58.4, ತಾಳಿಕೋಟೆ 65.1, ಡವಳಗಿ 48.6, ಇಂಡಿ 16.5, ನಾದಾ ಬಿ.ಕೆ. 28.3, ಅಗರಖೇಡ 24.1, ಹೊರ್ತಿ 11.4, ಹಲಸಂಗಿ 16, ಚಡಚಣ 15, ಝಳಕಿ 9, ಸಿಂದಗಿ 38, ರಾಮನಹಳ್ಳಿ 36, ದೇವರ ಹಿಪ್ಪರಗಿ 60 ಮತ್ತು ಕೊಂಡಗುಳಿ 58 ಮಿ.ಮೀ.ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.