ವಿಜಯಪುರ: ಜಿಲ್ಲೆಯಾದ್ಯಂತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ನಾಲ್ಕು ಮನೆಗಳು ಪೂರ್ಣ ಹಾಗೂ 156 ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ಹಗಲು, ರಾತ್ರಿ ನಿರಂತರವಾಗಿ ತುಂತುರು ಮಳೆಯಾಗುತ್ತಿರುವುದರಿಂದ ಕೊಲ್ಹಾರ ತಾಲ್ಲೂಕಿನಲ್ಲಿ ನಾಲ್ಕು ಮನೆಗಳು ಪೂರ್ಣವಾಗಿ ಹಾನಿಗೊಳಗಾಗಿವೆ. ಬಬಲೇಶ್ವರ 6, ತಿಕೋಟಾ 21, ಬಸವನ ಬಾಗೇವಾಡಿ 5, ಕೊಲ್ಹಾರ 38, ನಿಡಗುಂದಿ 24, ಮುದ್ದೇಬಿಹಾಳ 21, ತಾಳಿಕೋಟೆ 18, ಇಂಡಿ 10, ಸಿಂದಗಿ 8 ಮತ್ತು ದೇವರ ಹಿಪ್ಪರಗಿಯಲ್ಲಿ 5 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ವ್ಯಕ್ತಿ ರಕ್ಷಣೆ
ವಿಜಯಪುರ ತಾಲ್ಲೂಕಿನ ಅತ್ತಾಲಟ್ಟಿ ಬಳಿ ಹಳ್ಳದಲ್ಲಿ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿದ್ದ ಬಂದೇನವಾಜ್ ಮೊಕಾಶಿ ಎಂಬುವವರನ್ನು ರಕ್ಷಣೆ ಮಾಡಲಾಗಿದೆ.
ಸಾರವಾಡದಿಂದ ಅತ್ತಾಲಟ್ಟಿಗೆ ಹೊರಟಿದ್ದ ವೇಳೆ, ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಮೊಕಾಶಿ ಅವರು ಮುಳ್ಳಿನ ಕಂಟಿಗೆ ಸಿಲುಕಿಕೊಂಡ ಬಳಿಕ ತಮ್ಮ ಬಳಿ ಇದ್ದ ಮೊಬೈಲ್ನಿಂದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಮಾಹಿತಿ ಬಂದಕೂಡಲೇ ಸ್ಥಳಕ್ಕೆ ತೆರಳಿದಅಗ್ನಿಶಾಮಕ ಸಿಬ್ಬಂದಿ, ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.
ಮಳೆ ವಿವರ
ಮನಗೂಳಿ 3 ಸೆಂ.ಮೀ., ಆಲಮಟ್ಟಿ 3.3, ಅರೇಶಂಕರ 1.6,ವಿಜಯಪುರ 1.5,
ಭೂತನಾಳ 1.4, ತಿಕೋಟಾ 2.5,ಮಮದಾಪೂರ 1.5, ಕನ್ನೂರ 1, ಬಬಲೇಶ್ವರ 1.6, ಅಗರಖೇಡ 2.5, ಹೊರ್ತಿ1.4, ಹಲಸಂಗಿ 4.2, ಚಡಚಣ 1.6,ಝಳಕಿ 1.2, ನಾಲತವಾಡ 4, ತಾಳಿಕೋಟಿ 4.9,ಢವಳಗಿ 2, ಸಿಂದಗಿ 2.8,ಕಡ್ಲೆವಾಡ 2.5, ದೇವರಹಿಪ್ಪರಗಿ 3, ಕೊಂಡಗೂಳಿ 2.7 ಸೆಂ.ಮೀ. ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.