ವಿಜಯಪುರ: ಜಿಲ್ಲೆಯ 2.4 ಲಕ್ಷ ರೈತರಿಗೆ ಡಿ.ಸಿ.ಸಿ. ಬ್ಯಾಂಕ್ ಈಗಾಗಲೇ ₹1043 ಕೋಟಿ ಬೆಳೆ ಸಾಲವನ್ನು ಸರ್ಕಾರದ ಸಹಾಯಧನ ಯೋಜನೆಯಡಿ ಶೂನ್ಯ ಬಡ್ಡಿ ದರದಲ್ಲಿ ವಿತರಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶಿವಾನಂದ ಎಸ್.ಪಾಟೀಲ ತಿಳಿಸಿದ್ದಾರೆ.
ಕೋವಿಡ್ನಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿರುವುದನ್ನು ಮತ್ತು ಸಕಾಲಿಕವಾಗಿ ಮುಂಗಾರು ಮಳೆ ಆಗಿರುವುದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದನ್ನು ಪರಿಗಣಿಸಿ ಈ ವರ್ಷ ಡಿ.ಸಿ.ಸಿ. ಬ್ಯಾಂಕ್ ₹200 ಕೋಟಿ ಬೆಳೆ ಸಾಲವನ್ನು ಹೆಚ್ಚುವರಿಯಾಗಿ ವಿತರಿಸಲು ಕ್ರಮಕೈಗೊಂಡಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರು ಪಡೆದ ಸಾಲ ₹50 ಸಾವಿರಕ್ಕಿಂತ ಕಡಿಮೆ ಇದ್ದಲ್ಲಿ ಅವರಿಗೆ ಮಂಜೂರಾದ ತಾತ್ವಿಕ ಮಿತಿಗೆ ಒಳಪಟ್ಟು ಗರಿಷ್ಠ ₹ 55 ಸಾವಿರದ ವರೆಗೆ ಮತ್ತು ₹50 ಸಾವಿರಕ್ಕಿಂತ ಹೆಚ್ಚಿನ ಸಾಲ ಹೊಂದಿದ ರೈತರಿಗೆ ಸಾಲದ ಬಾಕಿ ಮೇಲೆ ಶೇ10 ರಷ್ಟು ಹೆಚ್ಚುವರಿ ಸಾಲ ನೀಡಲಾಗುತ್ತಿದೆ ಎಂದರು.
ರೈತರಿಗೆ ಹೆಚ್ಚುವರಿ ಸಾಲವನ್ನು ಅರ್ಹತೆ ಆಧರಿಸಿ ಕೂಡಲೇ ನೀಡಲಾಗುತ್ತಿದ್ದು, ಹೆಚ್ಚುವರಿ ಸಾಲವನ್ನು ಈ ಹಿಂದೆ ಪಡೆದ ಸಾಲದ ಗಡುವಿನ ದಿನಾಂಕಕ್ಕೆ ಮರುಪಾವತಿಗೆ ನಿಗದಿಪಡಿಸಿದೆ. ಇದರೊಂದಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಪಡೆಯದೇ ಇರುವ ಮತ್ತು ಹೊಸದಾಗಿ ಸದಸ್ಯರಾಗುವ ರೈತರಿಗೆ ಮೊದಲ ಹಂತದಲ್ಲಿ ಅರ್ಹತೆ ಆಧರಿಸಿ ಗರಿಷ್ಠ ₹ 55 ಸಾವಿರ ಬೆಳೆ ಸಾಲ ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.