ADVERTISEMENT

ಪ್ರವಾಹದ ಆತಂಕ: ಆಲಮಟ್ಟಿ ಜಲಾಯಶದಿಂದ 3 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 14:05 IST
Last Updated 23 ಜುಲೈ 2021, 14:05 IST
ಆಲಮಟ್ಟಿ ಜಲಾಶಯದ ಹಿನ್ನೀರಿನ ದೃಶ್ಯ ಶುಕ್ರವಾರ ಕಂಡಿದ್ದು ಹೀಗೆ– ಪ್ರಜಾವಾಣಿ ಚಿತ್ರ: ಚಂದ್ರಶೇಖರ ಕೋಳೇಕರ
ಆಲಮಟ್ಟಿ ಜಲಾಶಯದ ಹಿನ್ನೀರಿನ ದೃಶ್ಯ ಶುಕ್ರವಾರ ಕಂಡಿದ್ದು ಹೀಗೆ– ಪ್ರಜಾವಾಣಿ ಚಿತ್ರ: ಚಂದ್ರಶೇಖರ ಕೋಳೇಕರ   

ಆಲಮಟ್ಟಿ (ವಿಜಯಪುರ):ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಎರಡು ದಿನದಿಂದ ಸುರಿಯುತ್ತಿರುವ ಭಾರಿ ಮಳೆಯ ಕಾರಣ ಮುಂಜಾಗ್ರತೆ ಕ್ರಮವಾಗಿ ಆಲಮಟ್ಟಿ ಜಲಾಶಯದಿಂದ 3 ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ.

3 ಲಕ್ಷ ಕ್ಯುಸೆಕ್ ನೀರು ನದಿಗೆ ಬಿಡುತ್ತಿರುವುದರಿಂದ ಆಲಮಟ್ಟಿ ಜಲಾಶಯದ ಕೃಷ್ಣಾ ನದಿ ತಳಪಾತ್ರದಲ್ಲಿ ಬೆಳೆ ಜಲಾವೃತಗೊಳ್ಳುವ ಆತಂಕ ಎದುರಾಗಿದೆ.ಇದಕ್ಕೆ ಸಮನಾಂತರವಾಗಿ ನಾರಾಯಣಪುರ ಜಲಾಶಯದಿಂದಲೂ 3 ಲಕ್ಷ ಕ್ಯುಸೆಕ್ ನೀರು ಬಿಡಲಾಗುತ್ತಿದ್ದು, ಮುಂದಿನ ಎರಡು ಮೂರು ದಿನಗಳ ಕಾಲ ಪ್ರವಾಹದ ಆತಂಕ ಇರಲಿದೆ.

26 ಗೇಟ್‌ಗಳಿಂದ ನೀರು:ಆಲಮಟ್ಟಿ ಜಲಾಶಯದ ಎಲ್ಲ 26 ಗೇಟ್‌ಗಳಿಂದ 2,57,500 ಕ್ಯುಸೆಕ್ ಹಾಗೂ ವಿದ್ಯುತ್
ಮೂಲಕ 42,500 ಕ್ಯುಸೆಕ್ ಸೇರಿ 3 ಲಕ್ಷ ಕ್ಯುಸೆಕ್ ನೀರನ್ನು ನದಿ ತಳಪಾತ್ರಕ್ಕೆ ಹರಿಸಲಾಗುತ್ತಿದೆ.24 ಗೇಟ್‌ಗಳನ್ನು 2.10 ಮೀಟರ್ ಹಾಗೂ ಎರಡು ಗೇಟ್‌ಗಳನ್ನು 0.8 ಮೀಟರ್ ಎತ್ತರಿಸಿ ನೀರು ಬಿಡಲಾಗುತ್ತಿದೆ.

ADVERTISEMENT

517 ಮೀಗೆ ಸೀಮಿತ:ಸದ್ಯ ಪ್ರವಾಹದ ಸ್ಥಿತಿಯಿದ್ದು 519.60 ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ 517.30 ಮೀ ವರೆಗೆ ನೀರಿದೆ. ಮುಂಜಾಗ್ರತೆಯ ಕ್ರಮವಾಗಿ ಜಲಾಶಯದಲ್ಲಿ 517 ಮೀ ವರೆಗೆ ಮಾತ್ರ ನೀರು ಸಂಗ್ರಹಿಸಲಾಗುವುದು, ಸದ್ಯ ಜಲಾಶಯಕ್ಕೆ 1.40 ಲಕ್ಷ ಕ್ಯುಸೆಕ್ ಒಳಹರಿವು ಇದೆ ಎಂದು ಮುಖ್ಯ ಎಂಜಿನಿಯರ್ ಎಚ್. ಸುರೇಶ ತಿಳಿಸಿದರು.

ಕರ್ನಾಟಕದ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು ಸಂಜೆಯ ವೇಳೆಗೆ 1.99 ಲಕ್ಷ ಕ್ಯುಸೆಕ್ ತಲುಪಿದೆ. ಘಟಪ್ರಭಾದಿಂದಲೂ 40 ಸಾವಿರ ಕ್ಯುಸೆಕ್ ನೀರು ಬರಲಿದೆ.ಕೊಯ್ನಾ ಸೇರಿದಂತೆ ಬಹುತೇಕ ಮಹಾರಾಷ್ಟ್ರದ ಅಣೆಕಟ್ಟುಗಳಿಂದ ನದಿಗೆ ನೀರು ಬಿಡಲಾಗುತ್ತಿದೆ. ಹೀಗಾಗಿ ಮುಂದಿನ ಒಂದೆರೆಡು ದಿನಗಳಲ್ಲಿ ಆಲಮಟ್ಟಿ ಜಲಾಶಯಕ್ಕೆ 2.5 ಲಕ್ಷ ದಿಂದ 3 ಲಕ್ಷ ಕ್ಯುಸೆಕ್ ವರೆಗೆ ನೀರು ಬರಲಿದೆ ಎಂದು ತಿಳಿಸಿದರು.

ಮಹಾ ಮಳೆ: ಮಹಾರಾಷ್ಟ್ರದ ಕೊಯ್ನಾದಲ್ಲಿ 61 ಸೆಂ.ಮೀ, ನವಜಾದಲ್ಲಿ ಸೆಂ.ಮೀ., ತುಳಸಿ 89.5 ಸೆಂ.ಮೀ, ವಾರಣಾ 57.4 ಸೆಂ.ಮೀ, ದೂಧಗಂಗಾ 48 ಸೆಂ.ಮೀ, ರಾಧಾನಗರಿ 56.7 ಸೆಂ.ಮೀ, ಪಾಥಗಾಂವ 43.6 ಸೆಂ.ಮೀ, ಧೋಮ ಬಾಕಳವಾಡಿ 39.9 ಸೆಂ.ಮೀ, ಕಾಸರಿ 32.1 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.