ADVERTISEMENT

ಹೋರಾಟಗಾರರ ಮೇಲೆ ಹಲ್ಲೆ; ಆರೋಪ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 5:52 IST
Last Updated 9 ಜನವರಿ 2018, 5:52 IST

ವಿಜಯಪುರ: ‘ವಿಜಯಪುರ ಚಲೋ ನ್ಯಾಯ ಕೇಳುವ ಚಳವಳಿಯ ಹೋರಾಟಗಾರರ ಮೇಲೆ ಇಲ್ಲಿನ ಅಂಬೇಡ್ಕರ್‌ ವೃತ್ತದಲ್ಲಿ ಸೋಮವಾರ ಹಲ್ಲೆಯಾಗಿದೆ’ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

‘ನಗರದಲ್ಲಿ ಈಚೆಗೆ ನಡೆದ ಪೈಶಾಚಿಕ ಕೃತ್ಯ ಖಂಡಿಸಿ, ಜ 9ರ ಮಂಗಳವಾರ ವಿಜಯಪುರ ಚಲೋ ಹಮ್ಮಿಕೊಳ್ಳಲಾಗಿತ್ತು. ವಿವಿಧೆಡೆಯ ಹೋರಾಟಗಾರರು ಈ ಚಳವಳಿಯಲ್ಲಿ ಭಾಗವಹಿಸಲಿದ್ದಾರೆ. ಅಂಬೇಡ್ಕರ್‌ ವೃತ್ತದಲ್ಲಿ ವೇದಿಕೆ ನಿರ್ಮಾಣಕ್ಕೆ ಸಂಬಂಧಿಸಿದ ಸ್ಥಳ ಪರಿಶೀಲಿಸುವ ಸಂದರ್ಭ ಪರಶುರಾಮ ಲಂಬು, ಕುಮಾರ ಶಹಾಪುರ ಎಂಬುವರು ಹಲ್ಲೆ ನಡೆಸಿದರು’ ಎಂದು ಹೋರಾಟದ ಮುಂಚೂಣಿ ವಹಿಸಿರುವ ಶ್ರೀನಾಥ ಪೂಜಾರಿ, ಬಿ.ಆರ್.ಭಾಸ್ಕರಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಹುಜನ ಸಮಾಜ ಪಕ್ಷದ ಮುಖಂಡ ಕಾಮಣ್ಣ ಗಂಗನಹಳ್ಳಿ, ಪತ್ರಕರ್ತ ಶಿವರಾಜ ಯಂಭತ್ನಾಳ ಹಲ್ಲೆಗೊಳಗಾಗಿ, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಪೊಲೀಸರು ರಾತ್ರಿಯಾದರೂ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದರು’ ಎಂದು ಅವರು ದೂರಿದರು.

ADVERTISEMENT

‘ನಗರದಲ್ಲಿ ಈಚೆಗೆ ನಡೆದ ದುರ್ಘಟನೆ ಮುಂದಿಟ್ಟುಕೊಂಡು ಹೊರಗಿನ ಕೆಲ ಸಂಘಟನೆಗಳ ಮುಖಂಡರು ಪ್ರತಿಭಟನೆ ಹೆಸರಲ್ಲಿ ಹಣ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಸ್ಥಳೀಯ ದಲಿತ ಮುಖಂಡರು ಸೋಮವಾರ ಎಡಿಸಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಅಂಬೇಡ್ಕರ್‌ ವೃತ್ತದಲ್ಲಿದ್ದ ಪ್ರಗತಿಪರ, ದಲಿತ ಸಂಘಟನೆಗಳ ಮುಖಂಡರನ್ನು ಸ್ಥಳೀಯ ದಲಿತ ಮುಖಂಡರು ಹೋರಾಟದ ಕುರಿತಂತೆ ಪ್ರಶ್ನಿಸಿದ್ದಾರೆ. ಎರಡೂ ಗುಂಪಿನ ನಡುವೆ ಕೈ ಕೈ ಮಿಲಾಯಿಸುವ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದ್ದಂತೆ ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ.

ಎರಡೂ ಕಡೆ ತಕರಾರು ನಡೆದಿರುವುದರಿಂದ ಪೊಲೀಸರು ಕಣ್ಗಾವಲಿಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾತ್ರಿ 8ರವರೆಗೂ ಯಾವುದೇ ದೂರು ದಾಖಲಾಗಿಲ್ಲ’ ಎಂದು ಅಧಿಕಾರಿ ಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.