ವಿಜಯಪುರ: ರಾಜ್ಯದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಕುರಿ, ಮೇಕೆಗಳನ್ನು ಕಳೆದುಕೊಂಡು ಕುರಿಗಾರರು ನಿರಾಶ್ರಿತರಾಗಿದ್ದಾರೆ. ಆದರೆ, ಕುರಿಗಾರರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಿಲ್ಲ ಎಂದುವಿಜಯಪುರ ಜಿಲ್ಲಾ ಕುರಿಗಾರರ ಸಂಘ ಆರೋಪಿಸಿದೆ.
ಮಳೆಯಿಂದ ಅನೇಕ ಕುರಿ ಮೇಕೆಗಳು ಪ್ರವಾಹದಲ್ಲಿ ಜೀವ ಕಳೆದುಕೊಂಡವು. ಆದರೆ, ಸರ್ಕಾರದ ಪರಿಹಾರ ದೊರೆತಿಲ್ಲ. ರಸ್ತೆ ಅಪಘಾತ, ರೈಲು ಡಿಕ್ಕಿ, ಕಳವು, ಕಾಡು ನಾಯಿಗಳ ಉಪಟಳ, ಕಳ್ಳತನ, ವಿಷ ಮಿಶ್ರಿತ ನೀರು ಕುಡಿದು, ವಿಷ ಆಹಾರ ತಿಂದು ಕುರಿಗಳು ಜೀವ ಕಳೆದುಕೊಂಡಿವೆ. ಆದರೆ, ಇದುವರೆಗೂ ಒಬ್ಬ ಕುರಿಗಾರನಿಗೂ ಸರ್ಕಾರದ ಸಹಾಯ ಧನ ಸಿಕ್ಕಿಲ್ಲ ಎಂದು ದೂರಿದೆ.
ಕುರಿಗಳು ಕಳುವುದಾರೆ ಅನೇಕ ಕಡೆ ಪೊಲೀಸರು ಕೇಸುಗಳನ್ನು ದಾಖಲಿಸಿಲ್ಲ. ಇಂತಹ ಪ್ರಕರಣದಲ್ಲಿ ಕುರಿಗಾರರು ನಿಸ್ಸಹಾಯಕರಾಗಿದ್ದಾರೆ. ವಿಪರೀತ ಮಳೆಯಿಂದ ಕುರಿಗಳು ನಲುಗಿ, ಅಶಕ್ತವಾಗಿವೆ. ಕಾಲು–ಬಾಯಿ ಬೇನೆ, ಸೀನು, ಕಂದಹಾಕುವುದು, ನೆಗಡಿ ಜೋರಾಗಿದ್ದು ಕೂಡಲೇ ಔಷಧೋಪಚಾರ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದೆ.
ನೆರೆಯಲ್ಲಿ ಕುರಿಗಳನ್ನು ಕಳೆದುಕೊಂಡ ಫಲಾನುಭವಿಗಳಿಗೆ ಕೂಡಲೇ ಒಂದು ಕುರಿ ಮೇಕೆಗೆ ₹15 ಸಾವಿರ ಪರಿಹಾರ ಕೊಡಬೇಕು. ಇಲ್ಲದಿದ್ದರೆ ಕುರಿಗಾರರು ರಾಜ್ಯದಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಕುರಿಗಾರರ ಸಂಘದ ಅಧ್ಯಕ್ಷ ಭೀರಪ್ಪ ಜುಮನಾಳ, ಜಿಲ್ಲಾ ಮುಖಂಡ ಸೋಮನಾಥ ಕಳ್ಳಿಮನಿ, ನಗರ ಕುರುಬರ ಸಂಘದ ರಾಜು ಕಗ್ಗೋಡ, ಜಿಲ್ಲಾ ಕುರುಬರ ಕುರುಬರ ಸಂಘದ ಅಧ್ಯಕ್ಷ ಮಲ್ಲಣ್ಣ ಶಿರಶ್ಯಾಡ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.