ವಿಜಯಪುರ: ಜಮೀನನ್ನು ಮಾರ್ಟ್ಗೇಜ್ ಮಾಡಲು ಲಂಚ ತೆಗೆದುಕೊಳ್ಳುತ್ತಿದ್ದ ಚಡಚಣ ತಹಶೀಲ್ದಾರ್ ಕಚೇರಿಯ ಎಫ್.ಡಿ.ಎ ಭ್ರಷ್ಟಾಚಾರ ನಿಗ್ರಹ ದಳದ ಬಲೆ ಬಿದ್ದಿದ್ದಾನೆ.
ಚಡಚಣ ತಾಲ್ಲೂಕಿನ ಚಣೆಗಾಂವ ಗ್ರಾಮದಲ್ಲಿರುವ ವಿಜಯಪುರದ ಸುಧೀಂದ್ರ ಜಹಗೀರದಾರ ಎಂಬುವವರಿಗೆ ಸಂಬಂಧಿಸಿದ 23 ಎಕರೆ 30 ಗುಂಟೆ ಜಮೀನನ್ನು ಮಾರ್ಟ್ಗೇಜ್ ಮಾಡಿಸಲು ‘ಭೂಮಿ’ ಡಾಟಾಬೇಸ್ನಲ್ಲಿ ಸರ್ಕಾರಿ ನಿರ್ಬಂಧ ಎಂಬುದನ್ನು ತೆಗೆದುಹಾಕಲು ಚಡಚಣ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಈ ಕೆಲಸ ಮಾಡಲು ₹ 4 ಸಾವಿರ ನೀಡುವಂತೆ ಕಚೇರಿಯ ವಿಷಯ ನಿರ್ವಾಹಕ ಉದಯಕುಮಾರ ಕಾಳೆ ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ಜುಲೈ 13ರಂದು ₹1 ಸಾವಿರ ಮುಂಗಡವಾಗಿ ಪಡೆದುಕೊಂಡಿದ್ದ ಕಾಳೆ, ಇನ್ನುಳಿದ ಹಣಕ್ಕಾಗಿ ಬೇಡಿಕೆ ಇಟ್ಟಾಗ ಸುಧೀಂದ್ರ ಅವರು ಎಸಿಬಿಗೆ ದೂರು ನೀಡಿದ್ದಾರೆ.
ಸೋಮವಾರ ಸಂಜೆ ಲಂಚವನ್ನು ತೆಗೆದುಕೊಳ್ಳುವಾಗ ವಿಜಯಪುರ ಎಸಿಬಿ ಪೊಲೀಸ್ ಠಾಣೆಯ ಡಿವೈಎಸ್ಪಿ ಮಂಜುನಾಥ ಗಂಗಲ್ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪರಮೇಶ್ವರ ಕಮಟಗಿ, ಚಂದ್ರಕಲಾ ಹೊಸಮನಿ ಸಿಬ್ಬಂದಿಗಳಾದ ಶೇಖ್, ಕನ್ನೂರ, ಮಂಜೆ, ಕೊಟ್ಯಾಳ, ಯಾಳವಾರ, ಸಲಗೊಂಡದಾಳಿ ನಡೆಸಿ, ಲಂಚದ ಹಣದ ಸಮೇತ ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.