ವಿಜಯಪುರ: ವಿಜಯಪುರ ನಗರದ ತಾಜ್ಬಾವಡಿಯ ಪುನರುಜ್ಜೀವನಗೊಳಿಸುವುದು ಮತ್ತು ಸಂರಕ್ಷಿಸುವುದಷ್ಟೇ ಅಲ್ಲದೇ ನಗರದಲ್ಲಿರುವ ಐತಿಹಾಸಿಕ ಗೋಳಗುಮ್ಮಟ, ತಾಜ್ಬಾವಡಿ, ಇಬ್ರಾಹಿಂರೋಜಾ ಮತ್ತು ಇತರೆ ಸ್ಮಾರಕಗಳನ್ನು ಸೇರಿಸಿ ಪ್ರತ್ಯೇಕವಾಗಿ ವಿಜಯಪುರ ಸ್ಮಾರಕಗಳ ಸಮೂಹ ಮಾಡಿ, ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಕ್ರಮ ವಹಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಪ್ರವಾಸೋದ್ಯಮ ಇಲಾಖೆ ಹಾಗೂ ವರ್ಲ್ಡ್ ಹೆರಿಟೇಜ್ ಮಾನ್ಯುಮೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಡಬ್ಲೂಎಂಫ್) ವಿಶ್ವ ಸ್ಮಾರಕಗಳ ನಿಧಿ ಸಹಭಾಗಿತ್ವದಲ್ಲಿ ಮತ್ತು ಟಿಸಿಎಸ್ ಫೌಂಡೇಶನ್ ಸಿಎಸ್ಆರ್ ಅನುದಾನದಡಿ ಸ್ಮಾರಕ ದತ್ತು ಯೋಜನೆಯಡಿಯಲ್ಲಿ ವಿಜಯಪುರ ನಗರದ ತಾಜಬಾವಡಿ ಸಂರಕ್ಷಣೆ ಹಾಗೂ ಅಭಿವೃದ್ಧಿಪಡಿಸುವ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
1620 ರಲ್ಲಿ ನಿರ್ಮಿಸಿದ 224 ಚದರ ಅಡಿ ವಿಸ್ತೀರ್ಣದಲ್ಲಿ 35 ಚದರ ಅಡಿ ಹೊರ ಪ್ರದೇಶ ಮತ್ತು ಸುಮಾರು 52 ಅಡಿ ಎತ್ತರದಲ್ಲಿರುವ ಐತಿಹಾಸಿಕ ತಾಜ್ಬಾವಡಿಯನ್ನು ಸಂರಕ್ಷಣೆ ಮಾಡಿ, ಅಭಿವೃದ್ದಿಗೊಳಿಸಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸ್ಮಾರಕದ ಆವರಣದಲ್ಲಿರುವ ಖಾಲಿ ಜಾಗದಲ್ಲಿ ಸಾಂಸ್ಕೃತಿಕ ಕಲ್ಯಾಣಿ- ಪುಸ್ಕರಣಿಯನ್ನು ನಿರ್ಮಿಸಲಾಗುವುದು, ಹಾಳಾಗಿರುವ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು, ಹಮಾಮ್ ಪ್ರದೇಶದ ಮತ್ತು ಸೆರಾಯ್ನ ಪೂರ್ವ ದಿಕ್ಕಿನಲ್ಲಿರುವ ಹಾಳಾಗಿರುವ ವಾಸ್ತುಶಿಲ್ಪದ ಅವಶೇಷಗಳನ್ನು ಪುನ:ಸ್ಥಾಪನೆಗಳಿಸಲಾಗುವುದು ಎಂದು ಅವರು ಹೇಳಿದರು.
ಈಗಾಗಲೇ ತಾಜ್ಬಾವಡಿ ಪುನರುಜ್ಜೀವನಗೊಳಿಸಲಾಗಿದೆ. ಹತ್ತಾರು ಬೃಹತ್ ಜೆಸಿಬಿ ಹಿಟಾಚಿ ಮಾದರಿಯ ಯಂತ್ರಗಳನ್ನು ಬಳಸಿ, ಬೃಹತ್ ಮೋಟಾರುಗಳನ್ನು ನೀರಿನ ಆಳಕ್ಕೆ ಇಳಿಸಿ ನೀರನ್ನು ಹೊರಹಾಕಿ ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಹಾನಗರ ಪಾಲಿಕೆ ಮೇಯರ್ ಮೆಹಜಬೀನ್ ಅಬ್ದುಲ್ ರಜಾಕ್ ಹೊರ್ತಿ, ಉಪ ಮೇಯರ್ ದಿನೇಶ್ ಹಳ್ಳಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಹಾಂತೇಶ್ ಬಿರಾದಾರ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಉಪಸ್ಥಿತರಿದ್ದರು.
ಐತಿಹಾಸಿಕ ತಾಜ್ಬಾವಡಿಯನ್ನು ಅಭಿವೃದ್ದಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಿ ಹೆಚ್ಚೆಚ್ಚು ಪ್ರವಾಸಿಗರನ್ನು ವಿಜಯಪುರಕ್ಕೆ ಆಕರ್ಷಿಸಲಾಗುವುದು .ಎಂ.ಬಿ.ಪಾಟೀಲ, ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.