ಧರ್ಮದ ವಿಚಾರದಲ್ಲಿ ಹೆಣ್ಣು ಶೂದ್ರಳು ಎಂಬ ವಿಚಾರಕ್ಕೆ ಶರಣರು ಸಮಾನತೆಯ ಸ್ಥಾನ ನೀಡಿ, ಕಾಯಕ ಮತ್ತು ದಾಸೋಹದ ಪರಂಪರೆ ಬೆಳೆಸಿ ಸ್ತ್ರೀ ವಿರೋಧಿಗಳಿಗೆ ಉತ್ತರ ಕೊಟ್ಟಿದ್ದಾರೆ.
‘ಹೆಣ್ಣು ಮಾಯೆಯಲ್ಲ ಮನದ ಮುಂದಣ ಆಸೆ ಮಾಯೆ...’ ಎಂದು ಸಂಪ್ರದಾಯಸ್ಥರ ಕಂದಾಚಾರಕ್ಕೆ ಇತಿಶ್ರೀ ಹಾಡಿ ‘ಶರಣ ಸತಿ, ಲಿಂಗ ಪತಿ’ ಎಂದರು. ಆ ಬಳಿವಿಡಿದು ಬಂದ ಶರಣೆ ಕಲ್ಯಾಣದ ವೈರಾಗ್ಯನಿಧಿ ಅಕ್ಕಮಹಾದೇವಿ.
ಶಿವಮೊಗ್ಗೆಯ ಉಡುತಡಿಯಲ್ಲಿ ಇರುವ ಸಂಸ್ಕಾರಸ್ಥ ದಂಪತಿ ಓಂಕಾರಶೆಟ್ಟಿ-ಲಿಂಗಮ್ಮರ ಪುತ್ರಿಯಾಗಿ ಮಹಾದೇವಿ ಜನಿಸುತ್ತಾಳೆ. ಸದಾ ಮನಯಲ್ಲಿ ಶಿವಪೂಜೆ, ಶಿವಸ್ಮರಣೆ ನಡೆಯುತ್ತಿತ್ತು, ಇದು ಮಹಾದೇವಿ ಬಾಲ್ಯದಲ್ಲಿದ್ದಾಗಲೇ ಪ್ರಭಾವ ಬೀರಿದ್ದರ ಕಾರಣ ಮಹಾದೇವಿ ಚಿಕ್ಕವಯಸ್ಸಿನಲ್ಲಿದ್ದಾಗಲೇ ಹಣೆಗೆ ಭಸ್ಮ, ಕೊರಳಲ್ಲಿ ರುದ್ರಾಕ್ಷಿಸರ ಸಾಮಾನ್ಯ ಉಡುಗೆ-ತೊಡುಗೆಯಿಂದ ಮಹಾದೇವಿ ಆಂತರಿಕವಾಗಿ ಮತ್ತು ಬಾಹ್ಯವಾಗಿ ಸುಂದರಿಯಾಗಿದ್ದಳು.
ವೈರಾಗ್ಯ ಆಗಲೇ ಮಹಾದೇವಿಯಲ್ಲಿ ಅಳವಟ್ಟಿತ್ತು. ದಿನನಿತ್ಯ ಪೂಜೆಗೊಳ್ಳುವ ಮಲ್ಲಿಕಾರ್ಜುನನಿಗೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದಳು. ಇಂಥ ವೈರಾಗ್ಯದ ಮಹಾದೇವಿಯ ಸೌಂದರ್ಯಕ್ಕೆ ಸೋತು ರಾಜಾ ಕೌಶಿಕ ಬಲವಂತವಾಗಿ ಮದುವೆಯಾಗುತ್ತಾನೆ. ತಂದೆ-ತಾಯಿ ರಾಜನ ಭಯದಿಂದ ಮಗಳನ್ನು ಸಮಾಧಾನ ಪಡಿಸಿ ಕಳಿಸಲು ಮುಂದಾದಾಗ, ‘ಇಹಕ್ಕೊಬ್ಬ ಗಂಡ, ಪರಕ್ಕೊಬ್ಬ ಗಂಡನೇ? ಲೌಕಿಕಕ್ಕೊಬ್ಬ, ಪಾರಮಾರ್ಥಕ್ಕೊಬ್ಬ ಗಂಡನೆ? ಎನ್ನ ಗಂಡ ಚೆನ್ನಮಲ್ಲಿಕಾರ್ಜುನ, ಕುಲ ಸೀಮೆಯಿಲ್ಲದ ನಿಸ್ಸೀಮ ಚೆಲುವ ನನ್ನ ಗಂಡ’ ಎಂದು ಹೇಳುತ್ತಾಳೆ.
ಸಂಗ್ರಹ: ಎಂ.ಬಿ.ಕಟ್ಟಿಮನಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.