ADVERTISEMENT

ಇಂಡಿ ಕ್ಷೇತ್ರಕ್ಕೆ ಶಾಸಕರಿಂದಲೇ ಅನ್ಯಾಯ: ಬಗಲಿ ಆರೋಪ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 14:05 IST
Last Updated 29 ಏಪ್ರಿಲ್ 2020, 14:05 IST
ಕಾಂಗ್ರೆಸ್ ಶಾಸಕ ಡಾ.ಯಶವಂತರಾಯಗೌಡ ಪಾಟೀಲ್
ಕಾಂಗ್ರೆಸ್ ಶಾಸಕ ಡಾ.ಯಶವಂತರಾಯಗೌಡ ಪಾಟೀಲ್   

ವಿಜಯಪುರ: ತಿಡಗುಂದ ಶಾಖಾ ಕಾಲುವೆಯಿಂದ ಇಂಡಿ ವಿಧಾನಸಭಾ ಕ್ಷೇತ್ರದ 19 ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಹಾಲಿ ಶಾಸಕ ಯಶವಂತರಾಯಗೌಡ ‍ಪಾಟೀಲ ಅವರು ತಡೆ ಒಡ್ಡುವ ಮೂಲಕ ಕ್ಷೇತ್ರಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಇಂಡಿ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಆರೋಪಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಡಿ ಕ್ಷೇತ್ರದಲ್ಲಿ ತಿಡಗುಂದಿ ಶಾಖಾ ಕಾಲುವೆಯ 47ನೇ ಕಿ.ಮೀ.ನಿಂದ 56ನೇ ಕಿ.ಮೀ.ವರಗೆ ಕಾಮಗಾರಿಗೆ ಟೆಂಡರ್‌ ಆಗಿ, ವರ್ಕ್‌ ಆರ್ಡರ್‌ ಕೂಡ ನೀಡಲಾಗಿತ್ತು. ಆದಿತ್ಯ ಕನ್‌ಸ್ಟ್ರಕ್ಷನ್‌ ಕಾಮಗಾರಿ ಪ್ರಾರಂಭ ಮಾಡಿದ್ದರು. ಆದರೆ, ಶಾಸಕರು ಈ ಕಾಮಗಾರಿ ನಡೆಯದಂತೆ ತಡೆದಿದ್ದಾರೆ’ ಎಂದು ಆರೋಪಿಸಿದರು.

‘ತಾವು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದ್ದಾರೆ’ ಎಂದರು.

ADVERTISEMENT

‘ತಿಡಗುಂದಿ ಜಲ ಸೇತುವೆಯಲ್ಲಿ ಪ್ರಥಮ ಬಾರಿಗೆ ನೀರು ಹರಿದ ಕಾರಣಕ್ಕೆ ಹಿಂದೂ ಸಂಪ್ರದಾಯದಂತೆ ಗಂಗಾ ಪೂಜೆ ಮಾಡಿ, ಬಾಗಿನ ಅರ್ಪಿಸಲಾಗಿದೆಯೇ ಹೊರತು ಲೋಕಾರ್ಪಣೆ ಕಾರ್ಯಕ್ರಮವಲ್ಲ. ಅಷ್ಟಕ್ಕೂ ಇದು ಖಾಸಗಿ ಕಾರ್ಯಕ್ರಮ ಆಗಿರುವುದರಿಂದ ಶಿಷ್ಟಾಚಾರ ಉಲ್ಲಂಘನೆಯ ಮಾತೆಲ್ಲಿ’ ಎಂದು ಪ್ರಶ್ನಿಸಿದರು.

‘ಬರದ ನಾಡಿನ ಭಗೀರಥ, ಆಧುನಿಕ ವಿಶ್ವೇಶ್ವರಯ್ಯ ಎಂದೇ ಎಂ.ಬಿ.ಪಾಟೀಲ ಪ್ರಖ್ಯಾತರಾಗಿದ್ದಾರೆ. ಅವರ ಬಗ್ಗೆ ಟೀಕೆ, ಆರೋಪ ಮಾಡಲು ಯಶವಂತರಾಯಗೌಡರಿಗೆ ನೈತಿಕತೆ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.