ADVERTISEMENT

ಆಲಮಟ್ಟಿ ಸೌಂದರ್ಯ ಸವಿಯಲು ‘ವೀವ್‌ ಪಾಯಿಂಟ್‌’

ಚಂದ್ರಶೇಖರ ಕೊಳೇಕರ
Published 13 ಮಾರ್ಚ್ 2021, 19:30 IST
Last Updated 13 ಮಾರ್ಚ್ 2021, 19:30 IST
ಎಎಲ್‌ಬಿಸಿ ಮುಖ್ಯ ಸ್ಥಾವರದ ಬಳಿ ನಿರ್ಮಿಸಿರುವ ವೀಕ್ಷಣಾ ಸ್ಥಳದಿಂದ ಕಾಣುವ ಕೃಷ್ಣೆಯ ಹಿನ್ನೀರು
ಎಎಲ್‌ಬಿಸಿ ಮುಖ್ಯ ಸ್ಥಾವರದ ಬಳಿ ನಿರ್ಮಿಸಿರುವ ವೀಕ್ಷಣಾ ಸ್ಥಳದಿಂದ ಕಾಣುವ ಕೃಷ್ಣೆಯ ಹಿನ್ನೀರು   

ಆಲಮಟ್ಟಿ: ಎಲ್ಲಿ ನೋಡಿದರಲ್ಲಿ ಹಸರಿನ ಹೊದಿಕೆ, ಅಪರೂಪದ ಸಸ್ಯರಾಶಿ, ಜತೆಗೆ ಕೃಷ್ಣೆಯ ಜಲರಾಶಿ, ಅಪರೂಪದ ಪಕ್ಷಿ ಸಂಕುಲ, ಜತೆಗೆ ವಿವಿಧ ಉದ್ಯಾನಗಳು.ಹೀಗೆ ಸಾಗುತ್ತದೆ ಆಲಮಟ್ಟಿಯ ಬಣ್ಣನೆ...

ಇಂತಹ ಆಲಮಟ್ಟಿಯ ಸುಂದರ ಪರಿಸರವನ್ನು ವೀಕ್ಷಿಸಲು ನಾನಾ ಕಡೆ ವೀಕ್ಷಣಾ ಸ್ಥಳ (ವೀವ್‌ ಪಾಯಿಂಟ್‌) ನಿರ್ಮಿಸಲಾಗಿದೆ. ಅಲ್ಲೆಲ್ಲ ಪ್ಯಾರಾಗೋಲಾ ಸುಂದರವಾಗಿ ನಿರ್ಮಿಸಲಾಗಿದೆ.

ಎಎಲ್‌ಬಿಸಿ ನರ್ಸರಿ:ಆಲಮಟ್ಟಿ ಪ್ರವೇಶಿಸುವ ಮುನ್ನವೇ ಹನುಮಂತ ದೇವಸ್ಥಾನದ ಬಳಿ ಇರುವ ಎಎಲ್‌ಬಿಸಿ ಮುಖ್ಯ ಸ್ಥಾವರದ ಬಳಿ ಕೃಷ್ಣೆಯ ಹಿನ್ನೀರಿನಲ್ಲಿ ಸುಂದರ ಪ್ಯಾರಾಗೋಲಾ ನಿರ್ಮಿಸಲಾಗಿದೆ.

ADVERTISEMENT

ಕೃಷ್ಣೆಯ ಹಿನ್ನೀರಿನ ಅಂಚಿನಲ್ಲಿಯೇ ಇರುವ ಇಲ್ಲಿ ಹಿನ್ನೀರಿನ ಅಲೆಗಳು,ಝುಳುಝುಳು‌ ನೀರಿನ ಶಬ್ದ, ಶಾಂತವಾಗಿರುವ ಕೃಷ್ಣೆಯ ಹಿನ್ನೀರಿನಲ್ಲಿ ಮೀನುಗಳ ಭೇಟೆಗೆ ಬರುವ ಪಕ್ಷಿಗಳ ಹಿಂಡು... ಹೀಗೆ ಅದ್ಭುತ ಸುಂದರ ದೃಶ್ಯಗಳನ್ನು ಇಲ್ಲಿ ಸವಿಯಬಹುದು. ಮನಸ್ಸು ಕ್ಷಣ ಮಾತ್ರವಾದರೂ ಶಾಂತತೆ, ಪ್ರಸನ್ನತೆಯನ್ನು ಇಲ್ಲಿ ಅನುಭವಿಸುತ್ತದೆ.

ಎಂಡಿ ಕಚೇರಿ ಬಳಿಯ ವೀವ್‌ ಪಾಯಿಂಟ್‌:ಇಲ್ಲಿಯ ಕೆಬಿಜೆಎನ್‌ಎಲ್‌ ಎಂಡಿ ಕಚೇರಿ ಸಮೀಪ, ರಾಕ್‌ ಉದ್ಯಾನದ ಮೇಲ್ಭಾಗದಲ್ಲಿ ನಿರ್ಮಿಸಿರುವ ವೀವ್ ಪಾಯಿಂಟ್ ನಿಂದ ಆಲಮಟ್ಟಿಯ ವಿವಿಧ ಉದ್ಯಾನಗಳು, ಸಹಸ್ರಾರು ಗಿಡಗಳ ಹಸಿರು ಹೊದಿಕೆಯನ್ನು ವೀಕ್ಷಿಸಬಹುದು, ಜತೆಗೆ ಆಲಮಟ್ಟಿ ಜಲಾಶಯವನ್ನು ದೂರಿನಿಂದ ಕಣ್ತುಂಬಿಕೊಳ್ಳಬಹುದು.

ಸೀತಮ್ಮನಗಿರಿ:ಜಲಾಶಯದ ಬಲಭಾಗದ ಸೀತಮ್ಮನ ಗುಡ್ಡದಲ್ಲಿ ಲವ ಕುಶ ಉದ್ಯಾನದ ಮೇಲ್ಭಾಗ, ಕಲ್ಲು ಬಂಡೆಗಳ ಮಧ್ಯೆ ಇರುವ ಪ್ಯಾರಾಗೋಲಾದ ಮೂಲಕ ಇಡೀ ಜಲಾಶಯವನ್ನು ಸಂಪೂರ್ಣವಾಗಿ ವೀಕ್ಷಿಸಬಹುದು, ಜಲಾಶಯದ ಮುಂಭಾಗ, ಹಿಂಭಾಗದ ಸುಂದರ ದೃಶ್ಯಗಳನ್ನು ಇಲ್ಲಿ ಸವಿಯಬಹುದು.

ಕೆಎಚ್‌ಡಿಸಿ ಪ್ರವಾಸಿ ಮಂದಿರದ ಮೇಲ್ಭಾಗ:ಸೀತಮ್ಮನಗುಡ್ಡದಲ್ಲಿ ನಿರ್ಮಾಣಗೊಂಡಿರುವ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಂದಿರದ ಮೇಲ್ಭಾಗದಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಾಸ್ತ ಎರಡನ್ನು ವೀಕ್ಷಿಸಬಹುದು. ನದಿಯ ನೀರಿನ ಮಧ್ಯೆ ಸೂರ್ಯ ಉದಯವಾಗುವ ದೃಶ್ಯ, ಉದಯವಾಗುವಾಗ ಬೀಳುವ ಎಳೆ ಬಿಸಿಲು ಮನಸ್ಸನ್ನು ಆಹ್ಲಾದಕರವನ್ನಾಗಿ ಮಾಡುತ್ತದೆ.

ಶೀಘ್ರವೇ ಮುಕ್ತಗೊಳಿಸಿ:ಎಂಡಿ ಕಚೇರಿ ಬಳಿ ಇರುವ ವೀವ್‌ ಪಾಯಿಂಟ್‌ ಬಳಿ ನಿರ್ಮಿಸಿರುವ ಗೇಟ್‌ ಸದಾ ಮುಚ್ಚಿರುತ್ತದೆ. ಅದು ತೆಗೆದು ಪ್ರವಾಸಿಗರಿಗೆ ಮುಕ್ತಗೊಳಿಸಬೇಕು ಎಂಬ ಬೇಡಿಕೆ ಹೆಚ್ಚಿದೆ.

ಆಲಮಟ್ಟಿಯ ನರ್ಸರಿ, ಸೀತಮ್ಮನಗುಡ್ಡದಲ್ಲಿ ಅರಣ್ಯ ಇಲಾಖೆ ವತಿಯಿಂದ ಪ್ಯಾರಾಗೋಲಾ ನಿರ್ಮಿಸಲಾಗಿದ್ದು, ಆಲಮಟ್ಟಿಯ ವಿವಿಧ ಸುಂದರ ಕ್ಷಣಗಳನ್ನು ಸವಿಯಬಹುದು ಎಂದು ಆರ್‌ ಎಫ್‌ ಒ ಮಹೇಶ ಪಾಟೀಲ ತಿಳಿಸಿದರು.

ಎಆರ್‌ಎಫ್‌ಒ ಸತೀಶ ಗಲಗಲಿ ಹಾಗೂ ಅವರ ತಂಡದವರು ಇದನ್ನು ಉತ್ತಮವಾಗಿ ಸುಂದರವಾಗಿ ನಿರ್ಮಿಸಿದ್ದಾರೆಂದು ಅವರು ತಿಳಿಸಿದರು.

ಮೈಮನಸ್ಸಗಳು ಈ ಲೌಕಿಕ ಬದುಕನ್ನು ಕ್ಷಣಕ್ಕಾದರೂ ಮರಿಸುವ ದೃಶ್ಯಗಳನ್ನು ಎಲ್ಲ ಕಡೆ ಸವೆಯಲು ಸ್ವಂತ ವಾಹನ ಮಾತ್ರ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.