ADVERTISEMENT

ವಿಜಯಪುರ: ಎಂಥ ಅಂದ, ಎಂಥ ಚಂದ ಅಂಬಾ ಭವಾನಿ

ಕನಕದಾಸ ಬಡಾವಣೆಯಲ್ಲಿ ವಿಜೃಂಭಣೆಯ ದಸರಾ ಆಚರಣೆ

ಬಸವರಾಜ ಸಂಪಳ್ಳಿ
Published 26 ಸೆಪ್ಟೆಂಬರ್ 2022, 19:45 IST
Last Updated 26 ಸೆಪ್ಟೆಂಬರ್ 2022, 19:45 IST
ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿ ಶ್ರೀ ಓಂಕಾರಿಣಿ ಆದಿಶಕ್ತಿ ತರುಣ ಮಂಡಳಿಯು ದಸರಾ ಪ್ರಯುಕ್ತ ಪ್ರತಿಷ್ಠಾಪಿಸಿರುವ ಅಂಬಾ ಭವಾನಿ ಭವ್ಯ ಮೂರ್ತಿ
ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿ ಶ್ರೀ ಓಂಕಾರಿಣಿ ಆದಿಶಕ್ತಿ ತರುಣ ಮಂಡಳಿಯು ದಸರಾ ಪ್ರಯುಕ್ತ ಪ್ರತಿಷ್ಠಾಪಿಸಿರುವ ಅಂಬಾ ಭವಾನಿ ಭವ್ಯ ಮೂರ್ತಿ   

ವಿಜಯಪುರ: ನಗರದ ಕನಕದಾಸ ಬಡಾವಣೆಯ ಶ್ರೀ ಓಂಕಾರಿಣಿ ಆದಿಶಕ್ತಿ ತರುಣ ಮಂಡಳಿಯು ನಾಡಹಬ್ಬ ದಸರಾ ಮಹೋತ್ಸವವನ್ನುದಶಕದಿಂದ ಶ್ರದ್ಧೆ, ಭಕ್ತಿ, ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದೆ.

ದಸರಾ ಆಚರಣೆ ಸಂಬಂಧ ಕನಕದಾಸ ಬಡಾವಣೆಯಲ್ಲಿ ಗುಡಿಯನ್ನು ಕಟ್ಟಿಅಂಬಾ ಭವಾನಿಯ ಭವ್ಯ ಮೂರ್ತಿಯನ್ನು ಶಾಶ್ವತವಾಗಿ ಪ್ರತಿಷ್ಠಾಪಿಸಿ, ನಿತ್ಯ ಪೂಜೆ ಸಲ್ಲಿಸುವ ಜೊತೆಗೆ ದಸರಾ ವೇಳೆಯಲ್ಲಿ ವಿಭಿನ್ನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನಮನ್ನಣೆ ಗಳಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದಶ್ರೀ ಓಂಕಾರಿಣಿ ಆದಿಶಕ್ತಿ ತರುಣ ಮಂಡಳಿಸಂಸ್ಥಾಪಕ ಬಸವರಾಜ ಆರ್‌.ಪತ್ತಾರ, ಮೂರು ವರ್ಷಗಳ ಹಿಂದೆ ಸೋಲಾಪುರದಲ್ಲಿ ಪೈಬರ್‌ನಿಂದ ತಯಾರಿಸಿದಅಂಬಾ ಭವಾನಿಯ ಆಕರ್ಷಕ, ಚಂದದ ಮೂರ್ತಿಯನ್ನು ₹1.20 ಲಕ್ಷ ನೀಡಿ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದರು.

ADVERTISEMENT

ನಿಂತ ಭಂಗಿಯಲ್ಲಿರುವ 6.5 ಅಡಿ ಎತ್ತರದ ಅಷ್ಟಭುಜಗಳ ಅಂಬಾಭವಾನಿಯ ಭವ್ಯ ಮೂರ್ತಿ ನೋಡಲು ಎರಡು ಕಣ್ಣು ಸಾಲದು.ಈ ಮೂರ್ತಿ 400 ವರ್ಷ ಬಾಳಿಕೆ ಬರುತ್ತದೆ ಎಂದು ಗ್ಯಾರಂಟಿ ನೀಡಿದ್ದಾರೆ. ಪ್ರತಿ ವರ್ಷ ಮೂರ್ತಿಗೆ ಬಣ್ಣ ಬಳಿಯಲಾಗುತ್ತದೆ ಎನ್ನುತ್ತಾರೆ ಅವರು.

ನಾಡಿನ ಶಕ್ತಿ ಪೀಠ ಕೊಲ್ಲೂರು, ಶೃಂಗೇರಿ,ಕಟೀಲು, ಚಾಮುಂಡೇಶ್ವರಿ ವೈಷ್ಣೋದೇವಿ, ತುಳುಜಾಪುರ, ಕೊಲ್ಹಾಪುರದಿಂದ ಬೆಳ್ಳಿನಾಣ್ಯ, ಮಣ್ಣು ತಂದು ಪೂಜೆ ಮಾಡಿ ದೇವಿ ಪೂರ್ತಿಯೊಳಗೆ ಹಾಕಲಾಗಿದೆ ಎಂದರು.

ಅಂಬಾಭವಾನಿಯ ಫೈಬರ್‌ ಮೂರ್ತಿಯ ಜೊತೆಗೆ ದೇವಿಯ ಪಂಚಲೋಹದಚಿಕ್ಕ ಮೂರ್ತಿ ಇದ್ದು, ಅದಕ್ಕೆ ನಿತ್ಯ ಅಭಿಷೇಕ ಮಾಡಲಾಗುತ್ತದೆ ಎನ್ನುತ್ತಾರೆ ಅವರು.

ದಸರಾ ಮಹೋತ್ಸವದ ಅಂಗವಾಗಿ ಲಲಿತ ಪಂಚಮಿಯಂದು ಘಟಸ್ಥಾಪನೆ ಮಾಡುತ್ತೇವೆ. ಕುಂಕುಮಾರ್ಚನೆ, ಗೊಂದಳಿ ಆಚರಣೆ, ಬನ್ನಿ ಮುಡಿಯುವ ಕಾರ್ಯಕ್ರಮ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಹುಣ್ಣಿಮೆ ದಿನ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಲಲಿತ ಪಂಚಮಿ ದಿನ ಅಂಬಾ ಭವಾನಿ ದೇವಿಯ ರಥದಲ್ಲಿ ಕೂರಿಸಿ ಕನಕದಾಸ ಬಡಾವಣೆಯ ಪ್ರಮುಖ ಮಾರ್ಗದಲ್ಲಿ ಎಳೆಯಲಾಗುತ್ತದೆ ಎನ್ನುತ್ತಾರೆ ಅವರು.

ದಸರಾದಲ್ಲಿ ನವರಾತ್ರಿಯಲ್ಲಿ ಅಂಬಾಭವಾನಿಗೆ ಒಂಬತ್ತು ಬಗೆಯ ವಸ್ತ್ರಾಲಂಕಾರ ಮಾಡುತ್ತೇವೆ ಎನ್ನುತ್ತಾರೆ ಅವರು.

ದಸರಾ ಕಾರ್ಯಕ್ರಮದ ವೇದಿಕೆಗೆಈ ಬಾರಿ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಸ್ಮರಣಾರ್ಥ ವೇದಿಕೆಗೆ ಹೆಸರಿಡಲಾಗಿದೆ ಎಂದು ಅವರು ತಿಳಿಸಿದರು.

ಅಂಬಾಭವಾನಿ ಗುಡಿ ಬಳಿ ಆಂಜನೇಯ ದೇವಸ್ಥಾನ, ಶಿವಾಲಯವೂ ಇದೆ. ದೇವಸ್ಥಾನದ ಆವರಣದಲ್ಲೇ ಸರ್ಕಾರಿ ಶಾಲೆ ನಿರ್ಮಾಣಕ್ಕೂ ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಾರೆ ಪತ್ತಾರ.

ಕನಕದಾಸ ಬಡಾವಣೆ ಬಹಳ ವಿಸ್ತಾರವಾದ ಪ್ರದೇಶವಾಗಿದೆ. ಆದರೆ, ಇಲ್ಲಿ ಶಕ್ತಿ ದೇವತೆಗಳ ದೇವಸ್ಥಾನ ಇರಲಿಲ್ಲ. ಇಲ್ಲಿಯ ಮಹಿಳೆಯರು ನಗರದ ಬೇರೆ ಕಡೆಗೆ ಪೂಜೆಗೆ ಹೋಗಬೇಕಿತ್ತು. ಇದನ್ನು ಮನಗಂಡು ನಮ್ಮ ಬಡಾವಣೆಯಲ್ಲೇ ಶಕ್ತಿ ದೇವತೆಯನ್ನು ಪ್ರತಿಷ್ಠಾಪಿಸುವ ಉದ್ದೇಶದಿಂದ ಅಂಬಾಭವಾನಿಯನ್ನು ಇಲ್ಲಿ ಪ್ರತಿಷ್ಠಾಪಿಸಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.