ಆಲಮಟ್ಟಿ: ಬಳಸಿ ಬೀಸಾಡಿದ ವಸ್ತುಗಳ ಬಳಸಿ, ಅದರ ಮೂಲಕ ಸರಳವಾಗಿ ರಚಿಸಿದ ವಿಜ್ಞಾನ ಚಾಲನಾ ಮಾದರಿಗಳ ಪ್ರದರ್ಶನ ಸಮೀಪದ ಬೇನಾಳ ಆರ್.ಎಸ್. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜರುಗಿತು.
ಅಲ್ಲಿಯ ವಿಜ್ಞಾನ ಶಿಕ್ಷಕ ಆನಂದ ರೇವಡಿ ಅವರ ಕಲ್ಪನೆಗೆ ಕೈಜೋಡಿಸಿದ್ದು, ಶಾಲೆಯ ಮುಖ್ಯ ಶಿಕ್ಷಕ ಹನುಮಂತಪ್ಪ, ಶಿಕ್ಷಕ ಪ್ರಭಾಕರ ಹೆಬ್ಬಾಳ ಹಾಗೂ ಶಾಲೆಯ ವಿದ್ಯಾರ್ಥಿಗಳ ತಂಡ. ಅದಕ್ಕೆ ಸಾಥ್ ನೀಡಿದ್ದು, ಅಜಿಂ ಪ್ರೇಮ್ ಜಿ ಫೌಂಡೇಷನ್ನ ನಿಡಗುಂದಿಯ ಸಂಪನ್ಮೂಲ ವ್ಯಕ್ತಿಗಳು.
5 ರಿಂದ 8ನೇ ವರ್ಗದ ವಿದ್ಯಾರ್ಥಿಗಳು ತಮ್ಮ ತಮ್ಮ ಪಠ್ಯದಲ್ಲಿನ ವಿಷಯಗಳನ್ನೇ ಆಧಾರವಾಗಿಟ್ಟುಕೊಂಡು ತಯಾರಿಸಿದ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಹಾಗೂ ವಿವರಣೆ ಗಮನ ಸೆಳೆಯಿತು.
ಬೆಳಕಿನ ನಾನಾ ಪ್ರಯೋಗಗಳು, ಬೆಳಕಿನ ವಿಭಜನೆ, ಸಾಂದ್ರತೆ, ನೀರಿನ ಶುದ್ಧೀಕರಣ, ಗಾಳಿಯ ಇರುವಿಕೆ ಹಾಗೂ ಒತ್ತಡ, ಮಾನವ ಶರೀರದ ವಿವಿಧ ಅಂಗವ್ಯೂಹಗಳ ಚಾಲನಾ ಮಾದರಿಗಳು, ಅಯಸ್ಕಾಂತೀಯ ಪ್ರಯೋಗಗಳು, ಹನಿ ನೀರಾವರಿ, ನೀರಿನಿಂದ ವಿದ್ಯುತ್ ಉತ್ಪಾದನೆ, ಜಲತರಂಗ, ಚಂದ್ರಯಾನ, ವಿದ್ಯುತ್ ಪ್ರವಾಹದ ಕಾಂತಿಯ ಪರಿಣಾಮ, ಸೂಜಿ ರಂಧ್ರ ಕ್ಯಾಮೆರಾ, ಬೆಳಕಿನ ವರ್ಣ ವಿಭಜಕ, ದ್ರವ್ಯದ ಸ್ಥಿತಿಗಳು, ನ್ಯೂಟನ್ ಸೈಕಲ್, ಮಾನವನ ಜೀರ್ಣಾಂಗವ್ಯೂಹ ಸೇರಿದಂತೆ ಸುಮಾರು 46 ಪ್ರಯೋಗಗಳನ್ನು ಪ್ರದರ್ಶಿಸಿದರು.
ಆಲಮಟ್ಟಿ, ವಂದಾಲ, ಚಿಮ್ಮಲಗಿ ಕ್ಲಸ್ಟರ್ ನ ನಾನಾ ಶಾಲೆಗಳ 100ಕ್ಕೂ ಅಧಿಕ ಶಿಕ್ಷಕರು, ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವೀಕ್ಷಿಸಿ, ಮಾಹಿತಿ ಪಡೆದರು.
ಎಫ್ ಎಲ್ ಎನ್ ಕಲಿಕಾ ಮೇಳ: ಇದರೊಂದಿಗೆ 1 ರಿಂದ 4 ನೇ ವರ್ಗದ ಮಕ್ಕಳಿಗಾಗಿ ಆರಂಭಿಕ ಭಾಷೆ ಹಾಗೂ ಗಣಿತ ಕಲಿಕಾ ಮೇಳವೂ ಜರುಗಿತು. ಸುಲಭವಾಗಿ ಇಂಗ್ಲಿಷ್, ಕನ್ನಡ ಹಾಗೂ ಗಣಿತದ ಮೂಲಕ್ರಿಯೆ ಕಲಿಯಲು ಅನುಕೂಲವಾಗುವಂತೆ ನಾನಾ ಕಲಿಕೋಪಕರಣಗಳು ಗಮನಸೆಳೆದವು.
ಸಮಾರೋಪ ಸಮಾರಂಭದಲ್ಲಿ ಜಿ.ಸಿ. ಮುತ್ತಲದಿನ್ನಿ, ತುಕಪ್ಪಗೌಡ ಬಿರಾದಾರ, ಯು.ವೈ.ಬಶೆಟ್ಟಿ, ಸುರೇಶ ಹುರಕಡ್ಲಿ, ಬಿ.ಎಂ. ಮನಗೂಳಿ, ಎಂ.ಬಿ.ದೋರನಳ್ಳಿ, ತಿಪ್ಪಣ್ಣ ಜಂಬಗಿ, ಮುನ್ನಾ ಬೆಣ್ಣಿ, ಹನುಮಂತಪ್ಪ, ಪ್ರಭಾಕರ ಹೆಬ್ಬಾಳ, ಆನಂದ ರೇವಡಿ ಇದ್ದರು.
ಸಾವಿತ್ರಿಬಾಯಿ ಫುಲೆ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತರಾದ ಎನ್.ಬಿ.ದಾಸರ ಹಾಗೂ ಆರ್.ಬಿ. ಬ್ಯಾಕೋಡ ಅವರನ್ನು ಸನ್ಮಾನಿಸಲಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.