
ಪೈಗಂಬರ್ ಮುಲ್ಲಾ
ವಿಜಯಪುರ: ವಿಜಯಪುರ ನಗರದ ಹೊರವಲಯದ ರಂಭಾಪುರ ಬಳಿ ನಿರ್ಜನ ಪ್ರದೇಶದಲ್ಲಿ ಐದರಿಂದ ಆರು ಜನರ ಗುಂಪೊಂದು ವ್ಯಕ್ತಿಯೊಬ್ಬರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೆಯಾಗಿದೆ.
‘ನನ್ನ ಮೇಲೆ ಜಾವೀದ್ ಸೌದಾಗರ್, ತೌಫೀಕ್ , ಬಿಲಾಲ್ ಹಾಗೂ ಇತರರು ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿ ಪೈಗಂಬರ್ ಮುಲ್ಲಾ ಎಂಬಾತ ಹೇಳಿಕೆ ನೀಡಿರುವ ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಜಯಪುರದವನೇ ಆದ ಪೈಗಂಬರ್ ಮುಲ್ಲಾ ಕಲಬುರಗಿ ಜಿಲ್ಲೆಯ ಶಾಬಾದ್ನಲ್ಲಿ ನೆಲೆಸಿದ್ದ. ಅಲ್ಲದೇ, 2023 ರಲ್ಲಿ ಹತ್ಯೆಯಾದ ರೌಡಿ ಶೀಟರ್ ಹೈದರ್ ನದಾಫ್ ನಿಕಟವರ್ತಿಯಾಗಿದ್ದ ಎನ್ನಲಾಗಿದೆ. ಇದೀಗ ವಿಜಯಪುರದ ಯುವಕರ ಗ್ಯಾಂಗ್ ಪೈಗಂಬರ್ ಮೇಲೆ ಹಳೆಯ ವೈಷಮ್ಯದ ಕಾರಣ ಶಾಬಾದ್ ನಿಂದ ಕರೆ ತಂದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಹೈದರ್ ನದಾಫ್ ಜೊತೆ ಗುರುತಿಸಿಕೊಂಡಿದಕ್ಕೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಪೈಗಂಬರ್ ಕಲಬುರಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ‘ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಎರಡು ವಿಡಿಯೊ ಗಮನಿಸಿದ್ದೇನೆ. ಹಲ್ಲೆಗೆ ಒಳಗಾದ ವ್ಯಕ್ತಿ ಇದುವರೆಗೂ ಯಾವುದೇ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಿಲ್ಲ. ಆದರೂ ಹಲ್ಲೆಗೊಳಗಾದ ವ್ಯಕ್ತಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು, ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ’ ಎಂದರು.
‘ಹಲ್ಲೆಗೊಳಗಾದ ವ್ಯಕ್ತಿಯ ಹೇಳಿಕೆಯನ್ನು ದಾಖಲಿಸಿದ ನಂತರ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.