ವಿಜಯಪುರ: ಹಣದ ಆಮಿಷಕ್ಕೆ ಮಹಿಳೆಯೊಬ್ಬರು ಹಸುಗೂಸನ್ನೇ ಮಾರಾಟ ಮಾಡಿದ್ದು, ಈ ಸಂಬಂಧ ಮೂವರ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 19 ರಂದು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ರೇಣುಕಾ ಸದಾಶಿವ ಕಾಂಬಳೆ ಎಂಬುವವರು ಜಿಲ್ಲಾಸ್ಪತ್ರೆಯ ನರ್ಸ್ ಒಬ್ಬರ ಮಧ್ಯಸ್ಥಿಕೆಯಲ್ಲಿ ₹ 5 ಸಾವಿರಕ್ಕೆ ಮಗುವನ್ನು ವ್ಯಕ್ತಿಯೊಬ್ಬರಿಗೆ ಆಗಸ್ಟ್ 26ರಂದು ಮಾರಾಟ ಮಾಡಿ, ಊರಿಗೆ ಮರಳಿದ್ದಾರೆ. ಬಳಿಕ ಮತ್ತೆ ಮಗು ಬೇಕು ಎಂದು ಜಿಲ್ಲಾಸ್ಪತ್ರೆಗೆ ಬಂದು ವಿಚಾರಿಸಿದ್ದಾರೆ. ಈ ವಿಷಯ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಧ್ಯ ಪ್ರವೇಶಿಸಿ, ದೂರು ದಾಖಲಿಸಿದ್ದಾರೆ.
ಮಗುವಿನ ಮಾರಾಟಕ್ಕೆ ಸಹಕರಿಸಿದ ವಿಜಯಪುರ ಜಿಲ್ಲಾಸ್ಪತ್ರೆಯ ನರ್ಸ್ ಕಸ್ತೂರಿ ಹಾಗೂ ಕಸ್ತೂರಿ ಪತಿ ಮಂಜುನಾಥ ಪಡಸಲಗಿ ಹಾಗೂ ಮಗುವನ್ನು ಖರೀದಿಸಿದ ವ್ಯಕ್ತಿ(ಹೆಸರು ತಿಳಿದುಬಂದಿಲ್ಲ) ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆಯಲ್ಲಿ ನರ್ಸ್ ಕಸ್ತೂರಿ ಅವರನ್ನು ಜಿಲ್ಲಾಸ್ಪತ್ರೆ ಸರ್ಜನ್ ಅವರು ಕೆಲಸದಿಂದ ಅಮಾನತು ಮಾಡಿದ್ದಾರೆ. ಪ್ರಕರಣ ತನಿಖೆಯ ಹಂತದಲ್ಲಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.