ವಿಜಯಪುರ: ವಿಜಯಪುರ ನಗರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಖಾಸಗಿ ಉದ್ಯೋಗ ಮಾಡುತ್ತಿರುವ ಯಾವುದೇ ಕುಟುಂಬದ ಯಜಮಾನ ಕೋವಿಡ್ನಿಂದ ತೀರಿಕೊಂಡು ಕುಟುಂಬ ನಿರ್ವಹಣೆ ಕಷ್ಟವಾದಲ್ಲಿ ಶ್ರೀ ಸಿದ್ಧೇಶ್ವರ ಸಂಸ್ಥೆ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಹಭಾಗಿತ್ವದಲ್ಲಿ ಆರ್ಥಿಕ ಸಹಾಯ ಮಾಡಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
ಅದೇ ರೀತಿ, ಕೋವಿಡ್ನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಜೀವನ ನಿರ್ವಹಣೆ ಮಾಡುವುದು ಕಷ್ಟವಾದಲ್ಲಿ ಅವರಿಗೂ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.
ಕೋವಿಡ್ನಿಂದ ಕಷ್ಟವನ್ನು ಎದುರಿಸುತ್ತಿರುವ ಪ್ರತಿ ಕುಟುಂಬದವರು ಅಥವಾ ಆ ಕುಟುಂಬದ ಬಗ್ಗೆ ಅಲ್ಲಿಯ ಬಡಾವಣೆ, ಓಣಿಯ, ಕಾಲೊನಿಯ ನಮ್ಮ ಕಾರ್ಯಕರ್ತರು ಅವರ ಬಗ್ಗೆ ವಿವರವನ್ನು ಶ್ರೀ ಸಿದ್ಧೇಶ್ವರ ಸಂಸ್ಥೆಗೆ ಸಲ್ಲಿಸಿದಲ್ಲಿ ಸಂಸ್ಥೆಯಿಂದ ಆ ಕುಟುಂಬದ ಬಗ್ಗೆ ಪರಿಶೀಲಿಸಿ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಆಯುರ್ವೇದ ಆಸ್ಪತ್ರೆಯಲ್ಲಿ ಲಸಿಕೆ: ನಗರದ ಸಾರ್ವಜನಿಕರು ಕೋವಿಡ್ ಲಸಿಕೆ ಎರಡನೇ ಡೋಜ್ ಪಡೆಯಲು ಜಿಲ್ಲಾಸ್ಪತ್ರೆಗೆ ಹೋಗಲು ಅಂಜಿಕೆಯಿಂದ ಹಿಂಜರೆಯುತ್ತಿರುವುದರಿಂದ ಜಿಲ್ಲಾಸ್ಪತ್ರೆಯ ಬದಲಾಗಿ ಅಡಕಿಗಲ್ಲಿ ಹತ್ತಿರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಲಸಿಕಾ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ಇನ್ನು ಮುಂದೆ ಮತಕ್ಷೇತ್ರದ ಜನರು ತಮ್ಮ ಎರಡನೇ ಡೋಸ್ಅನ್ನು ಬುಧವಾರದಿಂದ ಅಲ್ಲಿ ಪಡೆಯಬಹುದು ಎಂದು ನಗರ ಶಾಸಕಬಸನಗೌಡ ಪಾಟೀಲ ಯತ್ನಾಳ ತಿಳಿಸಿರುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.