ADVERTISEMENT

ಬಸವಜನ್ಮಭೂಮಿಯ ಮೆರುಗು ಹೆಚ್ಚಿಸಿದ ‘ಬಸವೇಶ್ವರ ವೃತ್ತ’

ಪ್ರಕಾಶ ಎನ್.ಮಸಬಿನಾಳ
Published 13 ಅಕ್ಟೋಬರ್ 2018, 19:45 IST
Last Updated 13 ಅಕ್ಟೋಬರ್ 2018, 19:45 IST
ಬಸವನಬಾಗೇವಾಡಿಯಲ್ಲಿನ ಅಶ್ವಾರೂಢ ಬಸವೇಶ್ವರರ ಕಂಚಿನ ಪ್ರತಿಮೆ
ಬಸವನಬಾಗೇವಾಡಿಯಲ್ಲಿನ ಅಶ್ವಾರೂಢ ಬಸವೇಶ್ವರರ ಕಂಚಿನ ಪ್ರತಿಮೆ   

ಬಸವನಬಾಗೇವಾಡಿ:ಹನ್ನೆರಡನೇ ಶತಮಾನದಲ್ಲಿ ಸಮಾನತೆಯ ಸಂದೇಶ ಸಾರಿ, ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದ ಮಹಾನ್‌ ದಾರ್ಶನಿಕ, ಕ್ರಾಂತಿಕಾರಿ ಜಗಜ್ಯೋತಿ ಬಸವೇಶ್ವರರು.

ಕನ್ನಡ ಸಾಹಿತ್ಯಕ್ಕೆ ಶ್ರೇಷ್ಠವಾದ ವಚನ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ ಈ ಮಹಾಮಹಿಮರ ಜನ್ಮಭೂಮಿ ಬಸವನಬಾಗೇವಾಡಿ.

ಪಟ್ಟಣದ ಹೃದಯ ಭಾಗದಲ್ಲಿ ಮೂಲ ನಂದೀಶ್ವರನ ದೇಗುಲ ಸನಿಹದಲ್ಲೇ ಬಸವೇಶ್ವರ ವೃತ್ತ ನಿರ್ಮಿಸಿ, ಅಶ್ವಾರೂಢ ಬಸವಣ್ಣನವರ ಕಂಚಿನ ಪ್ರತಿಮೆ ನಿರ್ಮಿಸಲಾಗಿದ್ದು, ಬಸವ ಭಕ್ತರು ಸೇರಿದಂತೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

ADVERTISEMENT

ಪಟ್ಟಣದ ಕೆಲ ವ್ಯಾಪಾರಸ್ಥರು ತಮ್ಮ ಸ್ನೇಹಿತರೊಂದಿಗೆ ಬಸವಣ್ಣ ಹುಟ್ಟಿದ ನೆಲದಲ್ಲಿ ಬಸವೇಶ್ವರ ವೃತ್ತ ಸ್ಥಾಪಿಸುವ ಅಗತ್ಯತೆ ಇದೆ ಎಂದು ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು. ಅವರ ಚಿಂತನೆ ಫಲವಾಗಿ ಇಪ್ಪತ್ತು ವರ್ಷಗಳ ಹಿಂದೆ ಬಸವೇಶ್ವರ ದೇವಸ್ಥಾನ ಮುಂಭಾಗದ ಪ್ರಮುಖ ರಸ್ತೆಯ ಮಧ್ಯ ಭಾಗದಲ್ಲಿ (ಮುದ್ದೇಬಿಹಾಳ, ಆಲಮಟ್ಟಿ, ವಿಜಯಪುರ ಸಂಪರ್ಕಿಸುವ ರಸ್ತೆ) ಬಸವಣ್ಣನವರ ಭಾವಚಿತ್ರ ಇಟ್ಟು ವೃತ್ತ ಸ್ಥಾಪನೆಗೆ ಮುನ್ನುಡಿ ಬರೆಯಲಾಗಿತ್ತು.

ನಂತರದಲ್ಲಿ ಬಸವೇಶ್ವರ ದೇವಸ್ಥಾನದ ಕಮಿಟಿ ಸದಸ್ಯರು, ಭವ್ಯವಾದ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ನಿರ್ಣಯ ತೆಗೆದುಕೊಂಡು, ಆಗ ಸಂಸತ್ ಸದಸ್ಯರಾಗಿದ್ದ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಮುಂದಾದರು.

‘ಮುಂಬೈನ ಪ್ರತಿಮೆ ತಯಾರಕರಿಂದ ಅಂದಾಜು ₹ 15 ಲಕ್ಷ ವೆಚ್ಚದಲ್ಲಿ ಭವ್ಯವಾದ ಅಶ್ವಾರೂಢ ಬಸವೇಶ್ವರ ಪ್ರತಿಮೆ ಸಿದ್ಧಗೊಂಡಿತು. ಆಗಿನ ಸಂದರ್ಭದಲ್ಲಿ ರಾಜ್ಯದಲ್ಲೇ ದೊಡ್ಡದಾದ ಕಂಚಿನ ಬಸವೇಶ್ವರರ ಪ್ರತಿಮೆಯಾಗಿತ್ತು ಇದು’ ಎಂದು ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಗೊಳಸಂಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೂಡಲಸಂಗಮ ಅಭಿವೃದ್ಧಿ ಮಂಡಳಿ ವೃತ್ತಕ್ಕೆ ಅಗತ್ಯವಿರುವ ನೀರಿನ ಕಾರಂಜಿ, ಕಾರಂಜಿಗೆ ವಿದ್ಯುತ್ ದೀಪದ ಬೆಳಕಿನ ಅಲಂಕಾರ ಸೇರಿದಂತೆ ವಿವಿಧ ಕಾಮಗಾರಿ ಪೂರ್ಣಗೊಳಿಸಿದ ನಂತರ, ಭೂಮಿ ಆಕಾರದ ಮೇಲಿನ ಪೀಠದ ಮೇಲೆ ಅಶ್ವಾರೂಢ ಬಸವೇಶ್ವರ ಮೂರ್ತಿಯ ಅನಾವರಣ ಕಾರ್ಯಕ್ರಮ 2008ರಲ್ಲಿ ನಡೆಯಿತು.

ವಿರಕ್ತಮಠದ ಮುರಘೇಂದ್ರ ಸ್ವಾಮೀಜಿ, ಆಗಿನ ಕ್ಷೇತ್ರದ ಶಾಸಕ, ತೋಟಗಾರಿಕಾ ಸಚಿವರಾಗಿದ್ದ ಎಸ್.ಕೆ.ಬೆಳ್ಳುಬ್ಬಿ, ಸಂಸತ್ ಸದಸ್ಯರಾಗಿದ್ದ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ವಿವಿಧ ಸಂಘಟನೆ ಮುಖಂಡರು ಪ್ರತಿಮೆ ಅನಾವರಣಕ್ಕೆ ಸಾಕ್ಷಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.