ADVERTISEMENT

ಬಸವೇಶ್ವರ ಜಾತ್ರೆ: ಮಹಿಳೆಯರಿಂದ ರೊಟ್ಟಿ ಸೇವೆ

ಮೆರವಣಿಗೆಗೆ ಸಿದ್ಧಲಿಂಗ ಸ್ವಾಮೀಜಿ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 15:28 IST
Last Updated 24 ಆಗಸ್ಟ್ 2024, 15:28 IST
ಬಸವನಬಾಗೇವಾಡಿಯಲ್ಲಿ ಬಸವೇಶ್ವರ ಜಾತ್ರೆ  ದಾಸೋಹಕ್ಕಾಗಿ ಮಹಿಳೆಯರು ರೊಟ್ಟಿಗಳ ಬುಟ್ಟಿಯನ್ನು ತಲೆಮೇಲೆ ಹೊತ್ತು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿದರು
ಬಸವನಬಾಗೇವಾಡಿಯಲ್ಲಿ ಬಸವೇಶ್ವರ ಜಾತ್ರೆ  ದಾಸೋಹಕ್ಕಾಗಿ ಮಹಿಳೆಯರು ರೊಟ್ಟಿಗಳ ಬುಟ್ಟಿಯನ್ನು ತಲೆಮೇಲೆ ಹೊತ್ತು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿದರು    

ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ (ಮೂಲನಂದೀಶ್ವರ) ಜಾತ್ರೆ ಅಂಗವಾಗಿ ದಾಸೋಹಕ್ಕೆ ಮಹಿಳೆಯರು ತಮ್ಮ ಮನೆಯಲ್ಲಿ ಮಾಡಿದ ರೊಟ್ಟಿಗಳ ಬುಟ್ಟಿಗಳನ್ನು ಶನಿವಾರ ಮೆರವಣಿಗೆ ಮೂಲಕ ದೇವಸ್ಥಾನದ ದಾಸೋಹ ಭವನಕ್ಕೆ ತಲುಪಿಸಿದರು.

ಸ್ಥಳೀಯ ವಿರಕ್ತಮಠದಲ್ಲಿ ಬಸವಣ್ಣನವರ ಭಾವಚಿತ್ರ ಹಾಗೂ ರೊಟ್ಟಿಯ ಬುಟ್ಟಿಗಳಿಗೆ ಸಿದ್ಧಲಿಂಗ ಸ್ವಾಮೀಜಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ನಂತರ ಮಹಿಳೆಯರು ರೊಟ್ಟಿ ಬುಟ್ಟಿಯನ್ನು ತಲೆಮೇಲೆ ಹೊತ್ತುಕೊಂಡು ಬಸವಜನ್ಮ ಸ್ಮಾರಕ, ಪಲ್ಲೇದ ಕಟ್ಟಿ, ಅಗಸಿ, ಬಸವೇಶ್ವರ ವೃತ್ತದ ಮಾರ್ಗವಾಗಿ ದೇವಸ್ಥಾನಕ್ಕೆ ತೆರಳಿದರು.

ADVERTISEMENT

ಪಟ್ಟಣದ ಮಹಿಳೆಯರು ಐದು ಸಾವಿರಕ್ಕಿಂತ ಹೆಚ್ಚು ರೊಟ್ಟಿಗಳನ್ನು ಹಾಗೂ ತಾಳಿಕೋಟೆ ತಾಲ್ಲೂಕಿನ ಹಗರಗುಂಡ ಎಲ್.ಟಿಯ ಸುರೇಶ ರಾಠೋಡ ಅವರು ಟ್ರ್ಯಾಕ್ಟರ್‌ ಮೂಲಕ ಎರಡು ಸಾವಿರ ರೊಟ್ಟಿಗಳನ್ನು ದಾಸೋಹ ಭವನಕ್ಕೆ ತಲುಪಿಸಿದರು.

‘ಜಾತ್ರೆಗೆ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಜಾತ್ರೆಯಲ್ಲಿ ನಿರಂತರವಾಗಿ ದಾಸೋಹ ನಡೆಯುತ್ತದೆ. ಪಟ್ಟಣದ ವಿವಿಧ ಬಡಾವಣೆಗಳ ಮಹಿಳೆಯರು ತಮ್ಮ ಮನೆಯಲ್ಲಿ ಮಾಡಿದ ರೊಟ್ಟಿಗಳನ್ನು ದಾಸೋಹಕ್ಕೆ ನೀಡುತ್ತಿರುವುದು ವಿಶೇಷ. ಇಂತಹ ಕಾರ್ಯಗಳು ಇತರರಿಗೆ ಮಾದರಿಯಾಗಲಿದೆ. ಜಾತ್ರೆಯ ಮೆರಗನ್ನು ಹೆಚ್ಚಿಸಲಿದೆ’ ಎಂದು ಶ್ರೀಗಳು ತಿಳಿಸಿದರು.

 ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಗುರಲಿಂಗ ಬಸರಕೋಡ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಅನಿಲ ರೊಟ್ಟಿ ಶೇಖರ ಗೊಳಸಂಗಿ, ಎಂ.ಜಿ.ಆದಿಗೊಂಡ, ಸಂಗಮೇಶ ಓಲೇಕಾರ,  ಬಾಬುಗೌಡ ಪಾಟೀಲ, ಶ್ರೀಕಾಂತ ಪಟ್ಡಣಶೆಟ್ಟಿ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.