ವಿಜಯಪುರ: ‘ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ. ಪಕ್ಷದ ವರಿಷ್ಠರು ಚುನಾವಣೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದ್ದಾರೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
‘ಕೆಲ ವಿರೋಧಿಗಳು, ಟಿಕೆಟ್ ಆಕಾಂಕ್ಷಿಗಳು ನನಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಅಪಪ್ರಚಾರ ನಡೆಸಿದ್ದಾರೆ. ನನಗೆ ಹಾರ್ಟೇ ಇಲ್ಲ, ಅಟ್ಯಾಕ್ ಆಗೋದು ಎಲ್ಲಿ? ಇಂತಹ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಆಸ್ತಿ ಹೆಚ್ಚಳವಾದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಹೌದು, ನನ್ನ ಆಸ್ತಿ ನೀವು ಬರೆದಿದ್ದಕ್ಕಿಂತ ಜಾಸ್ತಿಯೇ ಆಗಿದೆ. 20 ವರ್ಷಗಳ ಹಿಂದೆ ಲಕ್ಷದಷ್ಟು ಇದ್ದ ನನ್ನ ಆಸ್ತಿ ಮೌಲ್ಯ ಈಗ ಕೋಟಿಯಷ್ಟಾಗಿದೆ. ಇದು ನನ್ನ ಮತ್ತು ನನ್ನ ಮಕ್ಕಳು ಸ್ವಂತ ಶ್ರಮದಿಂದ ಸಂಪಾದಿಸಿದ ಆಸ್ತಿಯೇ ಹೊರತು ನಾನು ಯಾವುದೇ ಭ್ರಷ್ಟಾಚಾರ ಮಾಡಿ ಅಥವಾ ರಸ್ತೆ ಗೆಬರಿ ಹಣ ಮಾಡಿಲ್ಲ. ವಿಜಯಪುರದ ಗಾಂಧಿ ಚೌಕದಲ್ಲಿರುವ ಮಹಾತ್ಮನಷ್ಟೇ ಶುದ್ಧ, ಪ್ರಾಮಾಣಿಕವಾಗಿದ್ದೇನೆ’ ಎಂದರು.
‘ಸಂಸತ್ತಿನಲ್ಲಿ ಒಂದು ಪ್ರಶ್ನೆಯನ್ನೂ ಕೇಳಿಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,‘ಪ್ರಧಾನಿ, ಸಚಿವರಿಗೆ ಪತ್ರ ಬರೆದು ಮನವಿ ಮಾಡಿ, ಕ್ಷೇತ್ರದಲ್ಲಿನ ಕೆಲಸ ಮಾಡಿಸಿಕೊಳ್ಳುತ್ತೇನೆ. ಹೀಗಾಗಿ ಸದನದಲ್ಲಿ ಪ್ರಶ್ನೆ ಕೇಳುವ ಪ್ರಮೇಯವೇ ಬರುವುದಿಲ್ಲ. ಸದನದಲ್ಲಿ ಪ್ರಶ್ನೆ ಕೇಳಿ ಪ್ರಚಾರ ಗಿಟ್ಟಿಸುವ ಅಗತ್ಯ ನನಗಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.