ವಿಜಯಪುರ: ‘ವಾಡೇದ ಮಂದಾರ ಕೃತಿಯು ನಮ್ಮ ಭವ್ಯ ಇತಿಹಾಸ, ಸಂಸ್ಕೃತಿ ನೆನಪಿಸುವ, ನಮ್ಮ ಹಿರಿಯರನ್ನು ಗೌರವಿಸುವ ಮಾರ್ಗದರ್ಶಕ ಗ್ರಂಥವಾಗಿದೆ’ ಎಂದು ಶಾಸಕ ಎಂ.ಬಿ.ಪಾಟೀಲ ಹೇಳಿದರು.
ಬಬಲೇಶ್ವರ ವಾಡೆ ಆವರಣದಲ್ಲಿ ಬುಧವಾರ ಬಾಳಾಸಾಹೇಬಗೌಡ ಪಾಟೀಲ ಅವರ ಬದುಕಿನ ಚಿತ್ರಣವನ್ನು ಬಿಂಬಿಸುವ ‘ವಾಡೇದ ಮಂದಾರ’ ಕೃತಿ ಬಿಡುಗಡೆ ಹಾಗೂ ಗಂಗೂತಾಯಿ ಅವರ 15ನೇಪುಣ್ಯ ಸ್ಮರಣೆಯಲ್ಲಿ ಅವರು ಮಾತನಾಡಿದರು.
‘ಈ ಕೃತಿಯು ಮುಂದಿನ ಪೀಳಿಗೆಗೂ ಇತಿಹಾಸದ ಪುಟಗಳನ್ನು ತೆರೆದಿಡುವಂತಹ ಅಪರೂಪದ ಗ್ರಂಥವಾಗಿದೆ’ ಎಂದರು.
‘ಬಾಳಾಸಾಹೇಬಗೌಡ ಪಾಟೀಲ ಅವರು ನನ್ನ ತಂದೆ ಬಿ.ಎಂ.ಪಾಟೀಲ ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಇವರು ಯಾವ ಆಸೆ ಆಮಿಷಗಳಿಗೆ ಒಳಗಾಗದೇ ಸಮುದಾಯವನ್ನು ಒಗ್ಗೂಡಿಸಿದ ಮಹಾನ್ ವ್ಯಕ್ತಿ. ಬಬಲೇಶ್ವರ ಮಂಡಳದ ಪ್ರಧಾನರಾಗಿ ಸದಾ ಅಭಿವೃದ್ಧಿಗೆ ಚಿಂತನೆ ಮಾಡಿದ ವ್ಯಕ್ತಿ. ತಮ್ಮ ನೈತಿಕತೆ ಮತ್ತು ಚಾರಿತ್ರ್ಯದಿಂದ ಎಲ್ಲರಿಗೂ ಮಾದರಿಯಾಗಿ ಸುಂದರ ಸಮಾಜ ನಿರ್ಮಾಣದ ಕನಸುಗಾರರಾಗಿದ್ದಾರೆ’ ಎಂದು ತಿಳಿಸಿದರು.
ಬಬಲೇಶ್ವರ ಬೃಹನ್ಮಠ ಪೀಠಾಧ್ಯಕ್ಷ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಾಳಾಸಾಹೇಬಗೌಡ ಪಾಟೀಲ, ನಿವೃತ್ತ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಿ.ಆರ್.ತಮಗೊಂಡ, ಬಿಎಲ್ಡಿಇ ನಿರ್ದೇಶಕ ಎನ್.ಎಸ್.ಅಳ್ಳೊಳ್ಳಿ, ಹಿರಿಯ ಸಾಹಿತಿ ಡಾ.ಮ.ಗು.ಬಿರಾದಾರ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ, ಉಪಾಧ್ಯಕ್ಷ ವಿ.ಎನ್.ಬಿರಾದಾರ, ತಾಲ್ಲೂಕು ಪಂಚಾಯಿತಿ ಸದಸ್ಯೆ ಬೋರಮ್ಮ, ಡಾ.ವಿ.ಡಿ.ಐಹೊಳ್ಳಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಜಿ.ಬಿರಾದಾರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲು ಕನ್ನೂರ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ಇದ್ದರು.
ಮಹಾಂತೇಶ ಸಂಗಮ ನಿರೂಪಿಸಿದರು. ಮಹಾದೇವ ರೆಬಿನಾಳ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.