ADVERTISEMENT

ಗಜಮುಖನ ಪ್ರತಿಷ್ಠಾಪನೆ; ಭಕ್ತಿಯ ಆರಾಧನೆ

ಕೆರೆ-ಕಟ್ಟೆ, ತೆರೆದ ಬಾವಿಗಳಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆ ಬೇಡ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 16:19 IST
Last Updated 1 ಸೆಪ್ಟೆಂಬರ್ 2022, 16:19 IST
ವಿಜಯಪುರ ಜಲನಗರದ ಶ್ರೀಮತಿ ವಿಜಯಲಕ್ಷ್ಮೀ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆಯ ಅಂಗವಿಕಲ ಮಕ್ಕಳ ಪುನಶ್ಚೇತನ ಕೇಂದ್ರದ ಮಕ್ಕಳು ಗಣೇಶನ ವೇಷವನ್ನು ಧರಿಸಿ ವಿಶೇಷವಾಗಿ ಹಬ್ಬದ ಆಚರಣೆ ಮಾಡಿದರು 
ವಿಜಯಪುರ ಜಲನಗರದ ಶ್ರೀಮತಿ ವಿಜಯಲಕ್ಷ್ಮೀ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆಯ ಅಂಗವಿಕಲ ಮಕ್ಕಳ ಪುನಶ್ಚೇತನ ಕೇಂದ್ರದ ಮಕ್ಕಳು ಗಣೇಶನ ವೇಷವನ್ನು ಧರಿಸಿ ವಿಶೇಷವಾಗಿ ಹಬ್ಬದ ಆಚರಣೆ ಮಾಡಿದರು    

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಬೆಳಿಗ್ಗೆಯಿಂದ ಸಂಜೆ ವರೆಗೂ ಗಜಾನನನ್ನು ಮನೆ, ದೇವಸ್ಥಾನ, ಶಾಲೆ, ಕಾಲೇಜು, ಸಾರ್ವಜನಿಕ ಸ್ಥಳಗಲ್ಲಿ ನಿರ್ಮಿಸಿರುವ ಪೆಂಡಾಲ್‌ಗಳಿಗೆ ಭಕ್ತಿ, ಭಾವದಿಂದ ಆಹ್ವಾನ ಮಾಡಿ ಪ್ರತಿಷ್ಠಾಪಿಸಲಾಯಿತು.

ತೆರೆದ ವಾಹನಗಳಲ್ಲಿ ಗಣೇಶನ ಮೂರ್ತಿಗಳನ್ನು ಇರಿಸಿಭಜನೆ, ಬಾಜಾ ಭಜಂತ್ರಿ, ಡೊಳ್ಳಿನ ವಾದ್ಯ, ಡಿಜೆ, ಗುಲಾಲಿನ ರಂಗು, ಟಪ್ಪಾಂಗುಚ್ಚಿ ನೃತ್ಯದೊಂದಿಗೆ ಸಾಲು, ಸಾಲಾಗಿ ಮೆರವಣಿಗೆ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿ, ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.

ಗಣೇಶೋತ್ಸವ ಸಮಿತಿಗಳು ಆಕರ್ಷಕ ಪೆಂಡಾಲ್‌, ಮಂಟಪಗಳನ್ನುನಿರ್ಮಿಸಿ, ವೈವಿಧ್ಯಮಯವಾದ ವಿದ್ಯುತ್‌ ದೀಪಗಳಿಂದ ಆಲಂಕರಿಸಿದ್ದು, ನೋಡುಗರ ಗಮನ ಸೆಳೆಯುತ್ತಿವೆ. ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸಿದರು.

ADVERTISEMENT

ಗುರುವಾರ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನ ಕಾರ್ಯಕ್ರಮಗಳು ನಡೆದವು. ಭಕ್ತರು ಕುಟುಂಬ ಸಮೇತರಾಗಿ ಭೇಟಿ ನೀಡಿ, ಗಣಪನ ದರ್ಶನ ಪ‍ಡೆದರು.

ರಾತ್ರಿ ವೇಳೆ ಸುರಿದ ಧಾರಾಕಾರ ಮಳೆ ಮತ್ತು ವಿದ್ಯುತ್‌ ಕೈಕೊಟ್ಟ ಕಾರಣ ಪೆಂಡಾಲ್‌ಗಳಲ್ಲಿ ಸಾರ್ವಜನಿಕ ಉತ್ಸವ ಸಮಿತಿಯ ಪದಾಧಿಕಾರಿಗಳಿಗೆ ತೊಂದರೆಯಾಯಿತು.

ಗಣೇಶೋತ್ಸವದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಲ್ಲಿ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಮನವಿ

ಕೆರೆ-ಕಟ್ಟೆ ಮತ್ತು ತೆರೆದ ಬಾವಿಗಳಲ್ಲಿ ಸಾರ್ವಜನಿಕರು ಗಣೇಶ ವಿಗ್ರಹಗಳ ವಿಸರ್ಜನೆ ಮಾಡಬಾರದು ಎಂದುಜಿಲ್ಲಾಧಿಕಾರಿ ವಿಜಯ ಮಹಾಂತೇಶ್‌ ಮನವಿ ಮಾಡಿದ್ದಾರೆ.

ಬಣ್ಣ ಮತ್ತು ರಸಾಯನಲೇಪಿತ ಮೂರ್ತಿಗಳನ್ನು ವಿಸರ್ಜನೆ ಮಾಡಿದಲ್ಲಿ ಕೆರೆ ಮತ್ತು ಬಾವಿಯ ನೀರಿನಲ್ಲಿರುವ ಅಸಂಖ್ಯೆ ಜೀವರಾಶಿಗಳಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗಣೇಶ ವಿಗ್ರಹಗಳ ವಿಸರ್ಜನೆ ಕಾರ್ಯಕ್ರಮ ನಡೆಯುವಂತಾಗಬೇಕು. ಕೃತಕ ಹೊಂಡಗಳು ಸುಭದ್ರವಾಗಿರುವಂತೆ ನೋಡಿಕೊಳ್ಳಬೇಕು ಮತ್ತು ಹೊಂಡದ ಸುತ್ತಲು ಸಾಕಷ್ಟು ಸ್ಥಳವಕಾಶವಿರುವ ಹಾಗೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಮಹಾನಗರ ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕೆ ಅವರೊಂದಿಗೆ ನಗರದ
ತಾಜ್‌ ಬಾವಡಿ ಸೇರಿದಂತೆ ವಿವೆಧೆಡೆ ತೆರಳಿ, ಮಹಾನಗರ ಪಾಲಿಕೆಯಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ ಹೊಂಡಗಳ ಹಾಗೂ ಸಂಚಾರಿ ಗಣೇಶ ಮೂರ್ತಿ ವಿಸರ್ಜನಾ ವಾಹನ ವ್ಯವಸ್ಥೆಯ ಸಮಗ್ರ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.