ತಾಳಿಕೋಟೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಜಲಾವೃತವಾಗಿದೆ
ತಾಳಿಕೋಟೆ: ತಾಲ್ಲೂಕಿನಾದ್ಯಂತ ಅತಿವೃಷ್ಟಿ ಉಂಟಾಗಿ ರೈತರು ಬೆಳೆದ ಬೆಳೆ ಕೈಗೆ ಬರದಂತಾಗಿದೆ. ಅರ್ಧದಷ್ಟು ಫಸಲು ದೊರಕುವುದೂ ಕಷ್ಟವಾಗಿ ಪರಿಣಮಿಸಿದೆ ಎಂಬುದು ರೈತರ ನೋವಿನ ಮಾತು.
ಇಲ್ಲಿ ಹೆಚ್ಚಿನವು ಭತ್ತದ ಗದ್ದೆಗಳಾಗಿವೆ. ತೊಗರಿ ನೆಟೆ ಬಿದ್ದು ಹಾಳಾಗಿದೆ. ಹತ್ತಿಗೆ ತಾಮ್ರಬಾಧೆ, ಕಾಂಡ ಕೊರೆವಹುಳು ಕಾಡುತ್ತಿವೆ. ತೇವ ಹೆಚ್ಚಿದ್ದರಿಂದ ಹಾಗೂ ಮೋಡ ಕವಿದ ವಾತಾವರಣದಿಂದ ಹತ್ತಿಯ ಹೂ ಕಾಪು ಹಿಡಿಯದೆ ಉದುರಿಹೋಗುತ್ತಿದೆ. ಬಿಳಿತೊಳೆ ಒಡೆದ ಹತ್ತಿ, ಮಳೆಗೆ ತೊಯ್ದು ಕಪ್ಪಾಗಿದೆ. ಬಿಡಿಸಿದ ಹತ್ತಿ ತೊಳೆಗಳೂ ಒದ್ದೆಯಾಗಿದ್ದು, ಒಣಗಿಸುವುದೇ ಸವಾಲಾಗಿದೆ. ಸೂರ್ಯಕಾಂತಿ ಬೆಳೆ ಜೊಳ್ಳಾಗಿದೆ.
ಬಿತ್ತನೆ, ಕಾಳು–ಗೊಬ್ಬರ, ಕಸ ತೆಗೆಸಲು, ಎಡೆ ಹೊಡೆಯಲು, ಔಷಧ ಸಿಂಪಡಿಸಲು ಸಾಲ ಮಾಡಿದ್ದಾರೆ. ಈಗಾಗಲೇ ಐದಾರು ಬಾರಿ ಔಷಧ ಹೊಡೆಲಾಗಿದ್ದು, ಮತ್ತೆ ಔಷಧ ಹೊಡೆಯಲು ಹಣ ಇಲ್ಲದಂತಾಗಿದೆ. ದಸರಾ ಹಬ್ಬ ಆಚರಣೆಗೂ ದುಡ್ಡಿಲ್ಲವೆಂಬುದು ಬಹುತೇಕ ರೈತರ ನೋವಿನ ಮಾತು.
‘ಸರ್ಕಾರ ಕಾಲಹರಣ ಮಾಡದೆ, ಪರಿಹಾರ ನೀಡಿದರೆ ರೈತರು ಹಿಂಗಾರು ಬೆಳೆಯಾದರೂ ಬಿತ್ತನೆ ಮಾಡಬಹುದು. ಕಡಲೆಗೆ ಬೇಡಿಕೆ ಹೆಚ್ಚಿದೆ. ₹10 ಸಾವಿರ ಕೊಡುತ್ತೇನೆಂದರೂ ಕುಸುಬೆ ಬೀಜ ಸಿಗುತ್ತಿಲ್ಲ. ಧಾರವಾಡ ಕೃಷಿ ಮೇಳದಲ್ಲಿ ಹುಡುಕಿದರೂ ಬೀಜ ಲಭ್ಯವಾಗಲಿಲ್ಲ’ ಎಂದು ರೈತ ವೀರೇಶ ಕೋರಿ ತಿಳಿಸಿದರು.
‘ಹಿಂಗಾರು ಬಿತ್ತನೆಗೆ ಅವಶ್ಯವಿರುವ ಜೋಳ, ಕಡಲೆ, ಕುಸುಬೆ, ಗೋಧಿಯನ್ನು ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಅವಶ್ಯಕತೆಗೆ ತಕ್ಕಂತೆ ದೊರಕಿಸಬೇಕು’ ಎಂದು ರೈತರಾದ ಅಮರೇಶಪ್ಪ ಕೋರಿ, ಸಂಭಾಜಿ ಡಿಸಲೆ, ಕುಮಾರಗೌಡ ಪಾಟೀಲ, ನಾನಾಗೌಡ ಪಾಟೀಲ ಒತ್ತಾಯಿಸಿದರು.
‘ಪರಿಹಾರಕ್ಕೆ ಜಂಟಿ ಸಮೀಕ್ಷೆ ಆಧರಿಸಿ’
‘ಬೆಳೆಹಾನಿ ಸಮೀಕ್ಷೆಗೆ ಡ್ರೋಣ್ ಬಳಕೆ ಸ್ವಾಗತಾರ್ಹವಾಗಿದೆ. ಆದರೆ, ರಾಜ್ಯದಾದ್ಯಂತ ಮಳೆಯಿಂದ ಬೆಳೆ ಹಾನಿಯಾಗಿದ್ದು, ಡ್ರೋಣ್ ಬಳಕೆ ಮತ್ತು ನಿರ್ವಹಣೆಗೆ ಹೆಚ್ಚಿನ ವೆಚ್ಚ ತಗಲುವ ಸಾಧ್ಯತೆಗಳಿವೆ. ಅದಕ್ಕೆ ವೆಚ್ಚ ಮಾಡುವ ಹಣವನ್ನೇ ರೈತರಿಗೆ ಹೆಚ್ಚುವರಿ ಪರಿಹಾರವಾಗಿ ವಿತರಿಸಬೇಕು’ ಎಂದು ರೈತರಾದ ರಾಮನಗೌಡ ಬಿರಾದಾರ ಗೋಟಖಿಂಡ್ಕಿ, ಸಂಗನಗೌಡ ಇಂಗಳಗೇರಿ ಪೀರಾಪುರ, ನೀಲಕಂಠ ಉಳ್ಳಾಗಡ್ಡಿ ನಾಗೂರ ಹೇಳಿದರು.
‘ಡ್ರೋಣ ಸರ್ವೆಯನ್ನು ಪ್ರಾಯೋಗಿಕವಾಗಿ ನಡೆಸಲಿ. ಕೃಷಿ , ತೋಟಗಾರಿಕೆ, ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ನಡೆಸುವ ಸಮೀಕ್ಷಾ ವರದಿ ಆಧಾರದಲ್ಲಿ ತಕ್ಷಣ ಬೆಳೆ ಹಾನಿ ಪರಿಹಾರ ವಿತರಣೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಪರಿಹಾರಕ್ಕೆ ಜಂಟಿ ಸಮೀಕ್ಷೆ ಆಧರಿಸಿ’
‘ಬೆಳೆಹಾನಿ ಸಮೀಕ್ಷೆಗೆ ಡ್ರೋಣ್ ಬಳಕೆ ಸ್ವಾಗತಾರ್ಹವಾಗಿದೆ. ಆದರೆ, ರಾಜ್ಯದಾದ್ಯಂತ ಮಳೆಯಿಂದ ಬೆಳೆ ಹಾನಿಯಾಗಿದ್ದು, ಡ್ರೋಣ್ ಬಳಕೆ ಮತ್ತು ನಿರ್ವಹಣೆಗೆ ಹೆಚ್ಚಿನ ವೆಚ್ಚ ತಗಲುವ ಸಾಧ್ಯತೆಗಳಿವೆ. ಅದಕ್ಕೆ ವೆಚ್ಚ ಮಾಡುವ ಹಣವನ್ನೇ ರೈತರಿಗೆ ಹೆಚ್ಚುವರಿ ಪರಿಹಾರವಾಗಿ ವಿತರಿಸಬೇಕು’ ಎಂದು ರೈತರಾದ ರಾಮನಗೌಡ ಬಿರಾದಾರ ಗೋಟಖಿಂಡ್ಕಿ, ಸಂಗನಗೌಡ ಇಂಗಳಗೇರಿ ಪೀರಾಪುರ, ನೀಲಕಂಠ ಉಳ್ಳಾಗಡ್ಡಿ ನಾಗೂರ ಹೇಳಿದರು.
‘ಡ್ರೋಣ ಸರ್ವೆಯನ್ನು ಪ್ರಾಯೋಗಿಕವಾಗಿ ನಡೆಸಲಿ. ಕೃಷಿ , ತೋಟಗಾರಿಕೆ, ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ನಡೆಸುವ ಸಮೀಕ್ಷಾ ವರದಿ ಆಧಾರದಲ್ಲಿ ತಕ್ಷಣ ಬೆಳೆ ಹಾನಿ ಪರಿಹಾರ ವಿತರಣೆ ಮಾಡಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.