ನಾಲತವಾಡ: ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಯ್ಯನಗುಡಿ ಗ್ರಾಮದ ದಲಿತ ಸಮಾಜದವರು ನಾಲತವಾಡ ನಾಡಕಚೇರಿಯ ಉಪತಹಶೀಲ್ದಾರ್ ಮೂಲಕ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ದೌರ್ಜನ್ಯ ನಿರ್ಮೂಲನಾ ಸಮಿತಿ ಮಾಜಿ ಸದಸ್ಯ ಬಸವರಾಜ ಪೂಜಾರಿ ಸಿದ್ದಾಪುರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ಗ್ರಾಮದಲ್ಲಿ ನೂರಾರು ದಲಿತರ ಮನೆಗಳಿವೆ. ಗ್ರಾಮದಿಂದ ಕೃಷ್ಣಾ ನದಿಗೆ ಹೋಗುವ ತೆಪ್ಪಬಿಡುವ ಕಾಲ್ದಾರಿ ಇದ್ದು ಇದಕ್ಕೆ ಹೊಂದಿಕೊಂಡು ದಲಿತರ ಆಸ್ತಿಗಳು, ಜಮೀನುಗಳು ಇವೆ. ತಾಲ್ಲೂಕು ಆಡಳಿತ ಈ ರಸ್ತೆ ಅಗಲೀಕರಣ ಮಾಡಲು ಮುಂದಾಗಿದೆ. ಸದರಿ ರಸ್ತೆಯ ನಕ್ಷೆಯ ಪ್ರಕಾರ ಬೇರೆ ಕಡೆ ಇದ್ದರೂ ಅದನ್ನು ಮರೆಮಾಚಿ ದಲಿತರ ಜಮೀನುಗಳಿಗೆ ತೊಂದರೆ ಕೊಡಲು ಒತ್ತುವರಿ ಮಾಡುವ ಹುನ್ನಾರ ನಡೆಸಲಾಗುತ್ತಿದೆ ಎಂದು ಸಮಾಜದವರು ಆರೋಪಿಸಿದ್ದಾರೆ.
ಗುರುವಾರ ರಸ್ತೆ ಕೆಲಸ ಮಾಡುವುದಕ್ಕಾಗಿ ಬಂದವರನ್ನು ದಲಿತ ಸಮಾಜದವರೆಲ್ಲ ತಡೆದು ನಕ್ಷೆ ಪ್ರಕಾರ ರಸ್ತೆ ಎಲ್ಲಿದೆಯೂ ಅಲ್ಲಿ ಮಾಡುವಂತೆ ಪಟ್ಟು ಹಿಡಿದಿದ್ದರಿಂದ ಅವರ ಕೆಲಸ ಬಿಟ್ಟು ಹೋಗಿದ್ದಾರೆ. ಜಿಲ್ಲಾಧಿಕಾರಿಯವರು ಕೂಡಲೇ ಮಧ್ಯಪ್ರವೇಶಿಸಿ ರಸ್ತೆ ಅತಿಕ್ರಮಣ ಅಥವಾ ಒತ್ತುವರಿ ತಡೆಯಬೇಕು. ಒಂದು ವೇಳೆ ದಲಿತ ಸಮಾಜದವರ ಬೇಡಿಕೆಗೆ ಮನ್ನಣೆ ಕೊಡದೆ ಒತ್ತುವರಿ ಮಾಡಿ ರಸ್ತೆ ಮಾಡಲು ಮುಂದಾದರೆ ರಸ್ತೆ ಕೆಲಸದ ಸ್ಥಳದಲ್ಲೇ ದಲಿತ ಸಮಾಜದವರೆಲ್ಲರೂ ಆಮರಣ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಮನವಿಯ ಪ್ರತಿಗಳನ್ನು ವಿಜಯಪುರದ ಉಪವಿಭಾಗಾಧಿಕಾರಿ ಮತ್ತು ಮುದ್ದೇಬಿಹಾಳದ ತಹಶೀಲ್ದಾರ್ ಅವರಿಗೂ ಸಲ್ಲಿಸಲಾಗಿದೆ. ಗ್ರಾಮಸ್ಥರಾದ ಸಿ.ಪಿ.ತಳವಾರ, ಸುರೇಶ ಹೊಸಮನಿ, ಪ್ರಕಾಶ ಹೊಸಮನಿ, ಡಿ.ಜಿ.ಹೊಸಮನಿ, ಗಂಗಪ್ಪ, ಗುಂಡಪ್ಪ ಚಲವಾದಿಸೇರಿ 10ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.