ADVERTISEMENT

ಖಾಸಗಿ ಆಸ್ಪತ್ರೆಗಳಿಂದ ಹಗಲು ದರೋಡೆ: ಮುಶ್ರೀಪ್‌

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 13:59 IST
Last Updated 4 ಅಕ್ಟೋಬರ್ 2020, 13:59 IST
ವಿಜಯಪುರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡ ಅಬ್ದುಲ್‌ ಹಮೀದ್ ಮುಶ್ರೀಪ್ ಆರೋಗ್ಯ ಕಿಟ್‌ ವಿತರಿಸಿದರು  
ವಿಜಯಪುರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡ ಅಬ್ದುಲ್‌ ಹಮೀದ್ ಮುಶ್ರೀಪ್ ಆರೋಗ್ಯ ಕಿಟ್‌ ವಿತರಿಸಿದರು     

ವಿಜಯಪುರ: ಕೋವಿಡ್‌ ಚಿಕಿತ್ಸೆ ಹೆಸರಿನಲ್ಲಿ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಹಗಲು ದರೋಡೆ ಮಾಡಲು ಬಿಟ್ಟಿದ್ದು, ಇದರಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದುಕಾಂಗ್ರೆಸ್‌ ಮುಖಂಡ ಅಬ್ದುಲ್‌ ಹಮೀದ್ ಮುಶ್ರೀಪ್ ಆರೋಪಿಸಿದರು.

ಕಾಂಗ್ರೆಸ್‌ ವತಿಯಿಂದ ನಗರದ ವಾರ್ಡ್‌ ನಂ.19, 24 ಮತ್ತು 26ರಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರದ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಕೊರೊನಾ ಹೆಚ್ಚಾಗಿದೆ. ಸರ್ಕಾರ ಈ ರೋಗದ ಬಗ್ಗೆ ನಿರ್ಲಕ್ಷ್ಯವಹಿಸಿರುವುದು ದುರಾದೃಷ್ಟಕರ ಎಂದು ಹೇಳಿದರು.

ಕಾಂಗ್ರೆಸ್‌ ಹಮ್ಮಿಕೊಂಡಿರುವ ಆರೋಗ್ಯಹಸ್ತ ಕಾರ್ಯಕ್ರಮದ ಮುಖಾಂತರ ಜನರ ಸೇವೆ ಮಾಡಲು ನಮಗೆ ಸದಾವಕಾಶ ಸಿಕ್ಕಿದ್ದು, ಜನ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಸರ್ಕಾರ ಮಾಡಬೇಕಾದಂತ ಕೆಲಸವನ್ನು ಇಂದು ಕಾಂಗ್ರೆಸ್‌ ಮಾಡುತ್ತಿದೆ ಎಂದರು.

ಕೊರೊನಾ ರೋಗ ಇಡೀ ಮಾನವ ಕುಲಕ್ಕೆ ಕಂಟಕಪ್ರಾಯವಾಗಿದ್ದು, ಪರಸ್ಪರ ಅಂತರ ಕಾಯ್ದುಕೊಳ್ಳುವ ಹಾಗೂ ಮಾಸ್ಕ್‌, ಸ್ಯಾನಿಟೈಜರ್‌ ಬಳಸುವ ಮುಖಾಂತರ ತಡೆಗಟ್ಟಬಹುದು ಎಂದರು.

ಅಬ್ದುಲ್‌ ರಜಾಕ್‌ ಹೊರ್ತಿ ಮಾತನಾಡಿ, ಕೊರೊನಾ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಯಾರೂ ಇದನ್ನು ನಿರ್ಲಕ್ಷಿಸಬಾರದು ಎಂದರು.

ವಿಜಯಪುರ ನಗರ ಬ್ಲಾಕ್‌ ಅಧ್ಯಕ್ಷ ಜಮೀರ್‌ಅಹ್ಮದ್‌ ಬಕ್ಷೀ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್‌ ಖಾದರ್‌ ಖಾದೀಮ್‌, ಜಮೀರ್‌ ಅಹ್ಮದ್‌ ಬಾಂಗಿ, ಇದ್ರೂಷ್‌ ಬಕ್ಷೀ, ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ರಫಿಕ್‌ ಇನಾಮದಾರ, ರವೀಂದ್ರ ಜಾಧವ, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ‌ ಜಯಶ್ರೀ ಭಾರತೆ, ಮಂಜುಳಾ ಜಾಧವ, ಅಸೀಮಾ ಕಾಲೇಬಾಗ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.