
ಬಸವನಬಾಗೇವಾಡಿ : ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿ ನಿರ್ಮಿಸಿರುವ ಜಿ+1 ಗುಂಪು ಮನೆಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಿ ಈಗಾಗಲೇ ವಂತಿಕೆ ಹಣ ಪಾವತಿಸಿರುವ 109 ಫಲಾನುಭವಿಗಳಿಗೆ ಶೀಘ್ರ ಮನೆಗಳನ್ನು ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ., ಅವರು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿಗೆ ಬುಧವಾರ ಭೇಟಿ ನೀಡಿದ ಅವರು, ವಿವಿಧ ಕಾಮಗಾರಿಗಳನ್ನು ಪರಿಶೀಲನೆ ವೇಳೆ ಇಂಗಳೇಶ್ವರ ರಸ್ತೆಯಲ್ಲಿನ ಗುಂಪು ಮನೆಗಳ ಕಾಮಗಾರಿ ವೀಕ್ಷಿಸಿದರು.
ಇದಕ್ಕೂ ಮೊದಲು ಪಟ್ಟಣದ ಆಡಳಿತ ಸೌಧಕ್ಕೆ ಭೇಟಿ ನೀಡಿ ತಹಶೀಲ್ದಾರ್ ಕಾರ್ಯಾಲಯದ ಪ್ರಗತಿ ಪರಿಶೀಲನೆ ನಡೆಸಿ ಕಡತಗಳ ತ್ವರಿತ ವಿಲೇವಾರಿ ಹಾಗೂ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಂದಾಯ ಇಲಾಖೆಯ ಆಧುನಿಕ ಅಭಿಲೇಖಾಲಯಕ್ಕೆ ಭೇಟಿ ನೀಡಿ ಕಡತ-ವಹಿಗಳ ಸ್ಕ್ಯಾನಿಂಗ್, ಅಪಲೋಡಿಂಗ್, ಡಾಟಾ ಎಂಟ್ರಿ ಹಾಗೂ ಶಿರಸ್ತೇದಾರರ ಅನುಮೋದನೆ ಪ್ರಗತಿ ವಿವರ, ಡಿಜಿಟಲ್ ದಾಖಲೆಗಳ ವಿತರಣೆ ಕುರಿತು ಪರಿಶೀಲಿಸಿ ಎಲ್ಲ ಡಾಟಾ ಎಂಟ್ರಿ ಆಪರೇಟರಗಳಿಗೆ ಪ್ರತಿದಿನ 15,000-20,000 ಪುಟಗಳ ಸ್ಕ್ಯಾನಿಂಗ್ ಕಾರ್ಯ ನಿರ್ವಹಿಸಿ, ಮಾರ್ಚ್ 31ರೊಳಗೆ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಬಸವನಬಾಗೇವಾಡಿ ಪಟ್ಟಣದಲ್ಲಿರುವ ಮೆಗಾ ಮಾರುಕಟ್ಟೆಗೆ ಭೇಟಿ ನೀಡಿದ ಅವರು ಕಾಮಗಾರಿಯನ್ನು ವೀಕ್ಷಿಸಿ ಖಾಲಿ ಉಳಿದಿರುವ 55 ಅಂಗಡಿ ಮುಂಗಟ್ಟುಗಳ ಮಾಹಿತಿ ಪಡೆದು ಸಾರ್ವಜನಿಕರು, ವ್ಯಾಪಾರಸ್ಥರ ಅವಶ್ಯಕತೆಗೆ ಅನುಗುಣವಾಗಿ ಕಾಮಗಾರಿ ಕೈಗೊಂಡು ಬಾಕಿ ಅಂಗಡಿಗಳ ಹರಾಜು ಪ್ರಕ್ರಿಯೆ ಪೂರ್ಣಗೊಳಿಸುವಂತೆ ತಿಳಿಸಿದರು.
ನಂತರ ನಂದಿ ಮಾರುಕಟ್ಟೆ ಹಾಗೂ ನೂತನವಾಗಿ ನಿರ್ಮಿಸುತ್ತಿರುವ ಮಂಗಲ ಭವನಕ್ಕೆ ಭೇಟಿ ನೀಡಿ ಶೀಘ್ರವಾಗಿ ಕಾಮಗಾರಿ ಮುಗಿಸುವಂತೆ ಹೇಳಿದರು.
ಗಾಂಧಿನಗರ ಬಳಿಯ ಶಾದಿಮಹಲ್ ಕಾಮಗಾರಿ ಪರಿಶೀಲಿಸಿ ಬಸವಭವನಕ್ಕೆ ಭೇಟಿ ನೀಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ, ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಿ ಗಣಕೀಕೃತ ಮನೆಯ ಉತಾರೆ ನೀಡಬೇಕು, ಪುರಸಭೆಯ ತೆರಿಗೆ ವಸೂಲಿ ಹಾಗೂ ಕಸ ವಿಲೇವಾರಿ ಘಟಕದ ಸ್ವಚ್ಛತೆ ಮತ್ತು ಸಮರ್ಪಕ ಕಸ ವಿಲೇವಾರಿಗೆ ಆದ್ಯತೆ ನೀಡಲು ಪುರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಂತರ ಮನಗೂಳಿಗೆ ಭೇಟಿ ನೀಡಿ ಮನಗೂಳಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕೈಗೊಂಡ ಆಟದ ಮೈದಾನದ ಕಾಮಗಾರಿ ಪರಿಶೀಲಿಸಿದರು, ಬಳಿಕ ಚಿಕ್ಕ ನೀರಾವರಿ ಇಲಾಖೆಯಿಂದ ಕೆರೆ ಅಭಿವೃದ್ಧಿ ಪಡಿಸುತ್ತಿರುವ ಕಾಮಗಾರಿ ವೀಕ್ಷಿಸಿ ಕೂಡಲೇ ಮುಗಿಸಲು ಸೂಚನೆ ನೀಡಿದರು. ಮನಗೂಳಿ ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಹಾಗೂ ತೆರಿಗೆ ವಸೂಲಿ ಕುರಿತು ಕ್ರಮ ಕೈಗೊಳ್ಳಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು.
ಬಸವನಬಾಗೇವಾಡಿ ತಹಶೀಲ್ದಾರ್ ವೈ.ಎಸ್. ಸೋಮನಕಟ್ಟೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ. ಸೌದಾಗರ, ಎಇಇ ವಿಲಾಸ ರಾಠೋಡ, ಪುರಸಭೆಯ ಕಚೇರಿ ವ್ಯವಸ್ಥಾಪಕ, ಪ್ರಭಾರ ಮುಖ್ಯಾಧಿಕಾರಿ ಸುರೇಶ ಬಾಗೇವಾಡಿ, ಸಿಪಿಐ ಗುರುಶಾಂತ ದಾಶ್ಯಾಳ, ಪುರಸಭೆಯ ಕಂದಾಯ ಅಧಿಕಾರಿ ಶಬ್ಬಿರ ರೇವೂರಕರ, ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ, ಕಂದಾಯ ನಿರೀಕ್ಷಕ ಸಿದ್ದು ಶಿರಶ್ಯಾಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.