
ವಿಜಯಪುರ: ನಗರದ ಬಬಲೇಶ್ವರ ನಾಕಾ ಬಳಿ ನಿರ್ಮಿಸಲಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ವಾಣಿಜ್ಯ ಸಂಕೀರ್ಣದ ಮಳಿಗೆಗಳನ್ನು ಆದಷ್ಟು ಬೇಗ ಹಂಚಿಕೆ ಮಾಡಬೇಕು ಎಂದು ಬಿಜೆಪಿ ಮುಖಂಡ ಉಮೇಶ ಕಾರಜೋಳ ಒತ್ತಾಯಿಸಿದ್ದಾರೆ.
ಎಸ್.ಇ.ಪಿ, ಟಿ.ಎಸ್.ಪಿ ಅನುದಾನದ ಅಡಿಯಲ್ಲಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳನ್ನು ಪರಿಶಿಷ್ಟ ಜಾತಿ ಸಮುದಾಯಕ್ಕೆ ಹಂಚಬೇಕು. ಆದರೆ, ಮಹಾನಗರ ಪಾಲಿಕೆಯ ಸಭೆಯಲ್ಲಿ ಈ ಬಗ್ಗೆ ಯಾವ ಉಲ್ಲೇಖವೂ ಇಲ್ಲದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಈ ವಿಷಯವಾಗಿ ಮಹಾನಗರ ಪಾಲಿಕೆ ನಿಯಮಾವಳಿ ಗಾಳಿಗೆ ತೂರಿದೆ ಎಂದು ಆರೋಪಿಸಿದ್ದಾರೆ.
‘ರಸ್ತೆ ಅತಿಕ್ರಮಣದಲ್ಲಿ ಅಂಗಡಿ ಕಳೆದುಕೊಂಡಿರುವರಿಗೆ ಹಾಗೂ ಉಳಿದವರಿಗೆ ಹಂಚಿಕೆ ಮಾಡುವ ವಿಷಯ ಬರೆಯಲಾಗಿದೆ. ಈ ಮಳಿಗೆಗಳನ್ನು ಉಳಿದ ಸಮುದಾಯಗಳಿಗೆ ಹಂಚಿಕೆ ಮಾಡಲು ಬರುವುದೇ ಇಲ್ಲ. 2020–21ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ಎಸ್.ಇ.ಪಿ, ಟಿ.ಎಸ್.ಪಿ ಅಡಿಯಲ್ಲಿ ₹ 3.56 ಕೋಟಿ ವೆಚ್ಚದಲ್ಲಿ ಈ ಮಳಿಗೆ ನಿರ್ಮಿಸಿ 2022 ರಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ. ಹೀಗಿರುವಾಗ ಎಸ್.ಸಿ. ಸಮುದಾಯಕ್ಕೆ ಉಪ ಜೀವನ ಹಾಗೂ ಸ್ವ ಉದ್ಯೋಗಕ್ಕೆ ಅನುಕೂಲವಾಗಲು ಈ ಮಳಿಗೆ ಹಂಚಿಕೆಯಾಗಬೇಕು. ಆದರೆ ಈ ವಿಷಯವಾಗಿ ಮಹಾನಗರಪಾಲಿಕೆ ಬೇರೆ ನಿಲುವು ತಾಳಿ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಈ ವಿಷಯವನ್ನೇ ಉಲ್ಲೇಖಿಸಿಲ್ಲ’ ಎಂದು ಅವರು ಹೇಳಿದ್ದಾರೆ.
ಎಸ್.ಸಿ., ಎಸ್.ಟಿ. ಸಮುದಾಯಕ್ಕೆ ದೊಡ್ಡ ಅನ್ಯಾಯ ಮಾಡಲಾಗಿದೆ. ಕೂಡಲೇ ಇದನ್ನು ತಿದ್ದುಪಡಿ ಮಾಡಿ ಎಸ್.ಸಿ., ಎಸ್.ಟಿ. ಸಮುದಾಯಗಳಿಗೆ ಹಂಚಿಕೆ ಮಾಡಬೇಕು. ಇಲ್ಲವಾದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.