
(ಸಾಂದರ್ಭಿಕ ಚಿತ್ರ)
(ಎ.ಐ ಚಿತ್ರ)
ಹುಣಸಗಿ: ಕಳೆದ ಐದು ವರ್ಷದಿಂದಲೂ ಮಹಿಳೆಯೊಬ್ಬರಿಗೆ ಅತ್ತೆ ಹಾಗೂ ಪತಿ ಚಿತ್ರಹಿಂಸೆ ಕೊಡುತ್ತಿದ್ದ ಮಾಹಿತಿಯ ಮೇರೆಗೆ ಹುಣಸಗಿ ಸಿಪಿಐ ಹಾಗೂ ಪೊಲೀಸರ ತಂಡವು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಮನ್ವತೆಯೊಂದಿಗೆ ರಕ್ಷಿಸಿದ ಘಟನೆ ಹುಣಸಗಿ ಪೊಲೀಸ್ ಸರ್ಕಲ್ ವ್ಯಾಪ್ತಿಯಲ್ಲಿ ನಡೆದಿದೆ.
ಕೊಡೇಕಲ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಹೊರವಲದಯಲ್ಲಿ ಮಹಿಳೆಗೆ ಪತಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆ. ಯಾರಿಗಾದರೂ ಹೇಳಿದರೇ ಜೀವ ತಗೆಯುವದಾಗಿ ಬೆದರಿಕೆ ಒಡ್ಡಿದ್ದರು ಎಂದು ಮಹಿಳೆ ಮಾಹಿತಿ ನೀಡಿದ್ದರು.
ಮಹಿಳಾ ಸಹಾಯವಾಣಿಗೆ ಕರೆ ಬಂದಿದ್ದರಿಂದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಭೀಮರಾಯ ಅವರ ಮಾರ್ಗದರ್ಶನದಲ್ಲಿ ಮಿಷನ್ ಶಕ್ತಿ ಸಖಿ ಒನ್ ಸೆಂಟರ್ ಆಡಳಿಯತಾಧಿಕಾರಿ ಶೃತಿ ಹಾಗೂ ಪುಷ್ಪಲತಾ ಅವರು ಹುಣಸಗಿ ಸಿಪಿಐ ರವಿಕುಮಾರ ಹಾಗೂ ಸಿಬ್ಬಂದಿ ಯೊಂದಿಗೆ ಹೋಗಿ ಮಹಿಳೆ ಹಾಗೂ ಅವರ ಪುತ್ರಿಯನ್ನು ರಕ್ಷಿಸಿದ್ದಾರೆ.
‘ಮಹಿಳೆ ಮಾನಸಿಕವಾಗಿ ನೊಂದಿದ್ದು, ತಕ್ಷಣಕ್ಕೆ ಅವರನ್ನು ಸಾಂತ್ವಾನ ಕೇಂದ್ರಕ್ಕೆ ಕಳಿಸಿಕೊಡಲಾಗುತ್ತದೆ. ಆ ಬಳಿಕ ಅವರು ದೂರು ನೀಡಿದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಡಿವೈಎಸ್ಪಿ ಜಾವೇದ್ ಇನಾಮದಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.