ADVERTISEMENT

ಅನಿಮಿಯಾ ಮುಕ್ತ ದೇಶಕ್ಕಾಗಿ ಕೈಜೋಡಿಸಿ: ಡಾ.ರವೀಂದ್ರ ಮದ್ರಕಿ‌ ಕರೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:42 IST
Last Updated 26 ಫೆಬ್ರುವರಿ 2026, 5:42 IST
ಹೂವಿನಹಿಪ್ಪರಗಿ ಹೊರವಲಯದ ಆಶಿರ್ವಾದ ಶಾಲಾ ವಾರ್ಷಿಕೋತ್ಸವ ನಿಮಿತ್ತ ವಿಜಯಪುರದ ಯಶೋದಾ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು
ಹೂವಿನಹಿಪ್ಪರಗಿ ಹೊರವಲಯದ ಆಶಿರ್ವಾದ ಶಾಲಾ ವಾರ್ಷಿಕೋತ್ಸವ ನಿಮಿತ್ತ ವಿಜಯಪುರದ ಯಶೋದಾ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು   

ಹೂವಿನಹಿಪ್ಪರಗಿ: ‘ರಾಸಾಯನಿಕ ಮಿಶ್ರಿತ ಹಾಗೂ ಕೃತಕ‌ ಆಹಾರ ಸೇವನೆಯಿಂದ ಮಕ್ಕಳಲ್ಲಿ ಹಿಮೊಗ್ಲೋಬಿನ್ ಮಟ್ಟ ಕಡಿಮೆಯಾಗಿ ರಕ್ತಹೀನತೆ (ಅನಿಮಿಯಾ) ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ರಕ್ತಹೀನತೆ ನಿರ್ಮೂಲನೆಗೆ ಸರ್ಕಾರ ಈಗಾಗಲೇ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅನಿಮಿಯಾ ಮುಕ್ತ ದೇಶಕ್ಕಾಗಿ ಸರ್ಕಾರದೊಂದಿಗೆ‌ ಎಲ್ಲರೂ ಕೈಜೋಡಿಸಬೇಕು’ ಎಂದು ವೈದ್ಯ ಡಾ.ರವೀಂದ್ರ ಮದ್ರಕಿ ಕರೆ ನೀಡಿದರು.

ಗ್ರಾಮದ ಆಶೀರ್ವಾದ ಶಾಲಾ ವಾರ್ಷಿಕೋತ್ಸವದ ನಿಮಿತ್ತ ಮಂಗಳವಾರ ಶಾಲಾ ಆವರಣದಲ್ಲಿ ವಿಜಯಪುರದ ಯಶೋದಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಂದಿರ ತ್ಯಾಗ, ಪ್ರೇರಣೆ ಬಹಳ ಮುಖ್ಯ.‌ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಆರೋಗ್ಯವಾಗಿರಲು ನಿತ್ಯ ನಮ್ಮ ಮನಸ್ಸು, ಆಹಾರ ಹಾಗೂ ವ್ಯಾಯಾಮದ ಬಗ್ಗೆ ಗಮನವಿರಿಸುವುದು ಬಹಳ ಮುಖ್ಯ’ ಎಂದು‌ ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಹೂವಿನಹಿಪ್ಪರಗಿ ಪತ್ರಿವನ ಮಠದ ದ್ರಾಕ್ಷಾಯಣಿ ಅಮ್ಮನವರು ಮಾತನಾಡಿ, ‘ಮನೆಯಲ್ಲಿ ಮಕ್ಕಳು ತಂದೆ–ತಾಯಿ, ದೊಡ್ಡವರ ಆಹಾರ ಪದ್ಧತಿ, ನಡೆನುಡಿ, ಜೀವನಶೈಲಿ ಎಲ್ಲವನ್ನೂ ಅನುಕರಣೆ ಮಾಡುತ್ತಾರೆ. ಹಾಗಾಗಿ ಎಲ್ಲ ಸೂಕ್ಷ್ಮತೆ ಅರಿತು ಹಿರಿಯರು ಮಾದರಿಯಾಗಿ ನಡೆದುಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ವಿಶ್ವಬಂಧು‌ ಬಸವ ಸಮಿತಿ‌ ಅಧ್ಯಕ್ಷ ಡಾ.ಅಮರೇಶ ಮಿಣಜಗಿ ಮಾತನಾಡಿ, ವೈದ್ಯ ಡಾ.ರವೀಂದ್ರ ಮದ್ರಕಿ ಅವರು ಮೂರು ವರ್ಷಗಳಲ್ಲಿ 28 ವ್ಯಕ್ತಿಗಳ ಯಶಸ್ವಿ ಕಿಡ್ನಿ ಕಸಿ ಮಾಡುವ ಮೂಲಕ ನಾಡಿನ ಅಪರೂಪದ ಸಮಾಜಮುಖಿ ವೈದ್ಯರಾಗಿದ್ದಾರೆ. ಗ್ರಾಮೀಣ ಭಾಗದ ಯುವಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ’ ಎಂದರು.

ಸಂಸ್ಥೆಯ ಅಧ್ಯಕ್ಷ ಎಸ್.ವಿ. ಸಜ್ಜನ, ಮುಖಂಡರಾದ ಮಲ್ಲಣ್ಣ ಅಣ್ಣಪ್ಪನವರ, ನಿವೃತ್ತ ದಾದಿಯರಾದ ವಿಮಲಾಬಾಯಿ ಚವ್ಹಾಣ, ಪತ್ರಕರ್ತ ದಯಾನಂದ ಬಾಗೇವಾಡಿ ಮಾತನಾಡಿದರು. ಪ್ರಗತಿಪರ ರೈತ ಶಂಕರಗೌಡ ಮ್ಯಾಗೇರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ‌ ಮಲ್ಲಣ್ಣ ಲಚ್ಯಾಣ, ಸಂಸ್ಥೆಯ ನಿರ್ದೇಶಕ ರಾಜಶೇಖರ‌ ಸಜ್ಜನ, ವೈದ್ಯರಾದ ಡಾ. ಗುರುರಾಜ ಕುಲಕರ್ಣಿ, ಡಾ.ಶ್ರೀನಿವಾಸ, ಡಾ.ಸಚೀನ್ ಕಟ್ಟಿಮನಿ, ಡಾ.ಹರಿತಾ ಸಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.