ಚಡಚಣದ ಕುಮಾರ್ ಬಿರಾದಾರ ಮತ್ತು ಉಮ್ರಾಣಿಯ ಶ್ರೀಶೈಲ ಪೀರಗೊಂಡ
ವಿಜಯಪುರ: ವಾಹನ ಚಾಲನೆ (ಡ್ರೈವಿಂಗ್) ಕೆಲಸಕ್ಕೆ ಬರುತ್ತೇನೆ ಎಂದು ಹೇಳಿ ಮುಂಗಡ ತೆಗೆದುಕೊಂಡು ಕೆಲಸಕ್ಕೂ ಬಾರದೆ, ಹಣವನ್ನು ವಾಪಸ್ ಕೊಡದ ಗೋಡಿಹಾಳದ ಚಾಲಕನನ್ನು ದಿನವಿಡೀ ಕಬ್ಬಿಣದ ಕಂಬಕ್ಕೆ ಸರಪಳಿಯಿಂದ ಕಟ್ಟಿ, ಕಾಲಿಗೆ ಕೀಲಿ ಹಾಕಿ, ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಜಿಲ್ಲೆಯ ಹತ್ತಳ್ಳಿ ಗ್ರಾಮದಲ್ಲಿ ಘಟನೆ ಶುಕ್ರವಾರ ನಡೆದಿದೆ. ಗೋಡಿಹಾಳದ ಚಾಲಕ ಭಾಷಾ ಸಾಬ್ ಅಲ್ಲಾವುದ್ದೀನ್ ಮುಲ್ಲಾ (38) ಚಾಲಕ.
ಪ್ರಕರಣದ ಆರೋಪಿಗಳಾದ ಚಡಚಣದ ಕುಮಾರ್ ಬಿರಾದಾರ ಮತ್ತು ಉಮ್ರಾಣಿಯ ಶ್ರೀಶೈಲ ಪೀರಗೊಂಡ ಎಂಬುವವರು ಸೇರಿಕೊಂಡು ಚಾಲಕನನ್ನು ಚಡಚಣದಿಂದ ಬೈಕಿನಲ್ಲಿ ಹತ್ತಿಸಿಕೊಂಡು ಬಂದು ಹತ್ತಳ್ಳಿ ಗ್ರಾಮದ ಮಲ್ಲಿಕಾರ್ಜುನ ಬಿರಾದಾರ ಎಂಬುವವರ ಅಂಗಡಿಯ ಮುಂದೆ ಕಂಬಕ್ಕೆ ಸರಪಳಿಯಿಂದ ಕಟ್ಟಿಹಾಕಿ, ಕಾಲಿಗೆ ಕಿಲಿಹಾಕಿ ಮುಂಜಾನೆಯಿಂದ ಸಂಜೆ ವರೆಗೆ ಅಕ್ರಮವಾಗಿ ಬಂಧಿಸಿ, ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದರು.
ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ಈ ಸಂಬಂಧ ಚಡಚಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
'ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.