ADVERTISEMENT

ವಿಜಯಪುರದಲ್ಲಿ ಮೂರು ಬಾರಿ ಲಘು ಭೂಕಂಪನ: ಭಯಗೊಂಡ ಜನ

ರಿಕ್ಟರ್‌ ಮಾಪಕದಲ್ಲಿ 3.9 ರಷ್ಟು ತೀವ್ರತೆ ದಾಖಲು; ಮನೆಯಿಂದ ಹೊರ ಓಡಿಬಂದ ಜನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 11:42 IST
Last Updated 5 ಸೆಪ್ಟೆಂಬರ್ 2021, 11:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಿಜಯಪುರ: ವಿಜಯಪುರ ನಗರ ಸೇರಿದಂತೆ ಜಿಲ್ಲೆಯಬಬಲೇಶ್ವರ, ತಿಕೋಟಾ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ಆಲಮಟ್ಟಿ, ನಿಡಗುಂದಿ, ಮುಳವಾಡ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ವ್ಯಾಪ್ತಿಯಲ್ಲಿಶನಿವಾರ ರಾತ್ರಿ ಮೂರು ಭಾರಿ ಲಘು ಭೂಕಂಪನವಾಗಿದೆ.

ಶನಿವಾರದ ರಾತ್ರಿ 11.47 ರಿಂದ 11.49 ಹಾಗೂ ಭಾನುವಾರ ಬೆಳಿಗ್ಗೆ 4.15ರ ಅವಧಿಯಲ್ಲಿ ಭೂಕಂಪನವಾಗಿದ್ದು, ಆಲಮಟ್ಟಿಯಲ್ಲಿರುವ ಭೂಕಂಪನ ಮಾಪಕ(ರಿಕ್ಟರ್‌) ಕೇಂದ್ರದಲ್ಲಿ 3.9 ರಷ್ಟು ತೀವ್ರತೆ ದಾಖಲಾಗಿದೆ. ಭೂ ಕಂಪನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲೂ ದಾಖಲಾಗಿದೆ.

ನೆರೆಯ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಭೂಕಂಪನದ ಕೇಂದ್ರ ಬಿಂದು(Epicentre) ಆಗಿರುವುದಾಗಿಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ತಿಳಿಸಿದೆ.

ADVERTISEMENT

ಭೂಮಿಯೊಳಗೆ ತೀವ್ರವಾದ ಶಬ್ಧ(ಶಿಲಾ ಪದರಗಳು ಜಾರಿದ ಶಬ್ಧ) ಹಾಗೂ ಕಂಪಿಸಿದ ಅನುಭವವಾಗುತ್ತಿರುವಂತೆ ಭಯಭೀತರಾದ ಮಕ್ಕಳು, ಮಹಿಳೆಯರು, ವೃದ್ದರಾದಿಯಾಗಿ ಜನರು ಮನೆಯಿಂದ ಹೊರಗೆ ಓಡಿ ಬಂದು ರಸ್ತೆಯಲ್ಲಿ ಗಂಟೆಗಟ್ಟಲೇ ನಿಂತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ಭೂ ಕಂಪನದಿಂದ ಕಟ್ಟಡಗಳಿಗೆ ಹಾಗೂ ಯಾವುದೇ ಜೀವ ಹಾನಿಯಾಗಿಲ್ಲ. ಭೂಕಂಪನದ ವೇಳೆ ಮಳೆಯೂ ಸುರಿಯುತ್ತಿದ್ದರಿಂದ ಜನರ ಭಯ ಇಮ್ಮಡಿಗೊಂಡಿತ್ತು. ಭಯದಿಂದ ನಿದ್ರೆ ಇಲ್ಲದೇ ಜನರಾತ್ರಿಯಿಡಿ ಜಾಗರಣೆ ಮಾಡಿದರು.

‘ವಿಜಯಪುರ ಜಿಲ್ಲೆಯು ಭೂಕಂಪನ ವಲಯ-2ರಲ್ಲಿ ಬರುತ್ತಿದ್ದು, ಇದು ಕಡಿಮೆ ಅಪಾಯ ಇರುವ ವಲಯವಾಗಿರುವುದಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ ಹಾಗೂ ಸಾರ್ವಜನಿಕರು ಈ ಕುರಿತು ಯಾವುದೇ ಊಹಾಪೋಹಗಳಿಗೆ ಕಿವಿಗೊಡದಿರಲು ಮತ್ತು ಭಯಪಡಬಾರದು’ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ತಿಳಿಸಿದ್ದಾರೆ.

ಆಗಾಗ ಕಂಪನ

ಜಿಲ್ಲೆಯ ತಿಕೋಟಾ, ಬಾಬಾನಗರ, ಕನಮಡಿ, ಸೋಮದೇವರ ಹಟ್ಟಿ, ಮನಗೂಳಿ, ಉಕ್ಕಲಿ, ಮಲಘಾಣ, ಹುಣಶ್ಯಾಳ ಪಿ.ಬಿ., ಮಸೂತಿ, ಕರಭಂಟನಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಒಂದು ವರ್ಷದಿಂದ ಆಗಾಗ ಭೂಮಿಯೊಳಗೆ ಭಯಾನಕ ಶಬ್ಧ ಹಾಗೂ ಕಂಪನವಾಗುತ್ತಿದೆ. ಈ ಕುರಿತು ಜಿಲ್ಲಾಡಳಿತದ ಮನವಿ ಮೇರೆಗೆ ಬೆಂಗಳೂರಿನ ಭೂವಿಜ್ಞಾನಿಗಳು ಸ್ಥಳಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಿ, ಇದು ಭೂ ಕಂಪನವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಭೂಮಿಯೊಳಗೆ ನೀರು ಮತ್ತು ಶಿಲೆಗಳ ಚಲನೆಯಿಂದ ಭೂಕಂಪನವಾದ ಅನುಭವವಾಗುತ್ತದೆ. ಇದು ನೈಸರ್ಗಿಕ ಕ್ರಿಯೆ. ಇದಕ್ಕೆ ಜನ ಭಯಪಡುವ ಅಗತ್ಯವಿಲ್ಲ. ಇದನ್ನು ಭೂ ಕಂಪನ ಎನ್ನಲಾಗದು’ ಎಂದು ತಜ್ಞರು ಈಗಾಗಲೇ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ. ಆದರೆ, ಈ ಭಾಗದ ಜನರು ಮಾತ್ರ ಆಗಾಗ ಸಂಭವಿಸುತ್ತಿರುವ ಲಘು ಭೂ ಕಂಪನದಿಂದ ಆತಂಕಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.