ತಾಳಿಕೋಟೆ: ‘ನಾಡಿಗೆ ಅನ್ನ ನೀಡುವ ರೈತ ಸಂಕಷ್ಟದಲ್ಲಿದ್ದಾನೆ. ಅವನ ನೆರವಿಗೆ ಎಲ್ಲ ಮಠಾಧೀಶರೂ ಮಠ ಬಿಟ್ಟು ಬರಬೇಕು. ಕೃಷಿ ಇದ್ದರೆ ದೇಶ ಉಳಿಯುತ್ತದೆ. ಋಷಿ ಇದ್ದರೆ ಧರ್ಮ ಉಳಿಯುತ್ತದೆ ಆದ್ದರಿಂದ ನಮಗೆಲ್ಲ ಕೃಷಿಯನ್ನು ಉಳಿಸುವ ಅನ್ನ ನೀಡುವ ರೈತರನ್ನು ಬೆಂಬಲಿಸಬೇಕು. ಅವರಿಗೆ ನ್ಯಾಯ ಸಿಗುವವರೆಗೆ ಜೊತೆ ನಿಲ್ಲಬೇಕು’ ಎಂದು ಚಬನೂರನ ರಾಮಲಿಂಗಯ್ಯ ಶ್ರೀ ಹೇಳಿದರು.
ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯ ಅಂತಿಮ ಹಂತದ ಎಫ್ಐಸಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಕೊಡಗಾನೂರ ಗ್ರಾಮದ ಹತ್ತಿರ ರೈತರು ನಡೆಸುತ್ತಿರುವ ನಾಲ್ಕನೇ ದಿನದ ಹೋರಾಟದ ಸ್ಥಳಕ್ಕೆ ಅವರು ಮಂಗಳವಾರ ಭೇಟಿ ನೀಡಿ ಮಾತನಾಡಿದರು.
‘ರೈತರು ಪಕ್ಷಬೇಧ ಬಿಡಿ, ಆಗಿರುವ ಅನ್ಯಾಯಕ್ಕೆ ಹೋರಾಟವನ್ನು ಕೊಡಗಾನೂರನಿಂದ ವಿಜಯಪುರ ಜಿಲ್ಲೆಯವರೆಗೆ ವಿಸ್ತರಿಸಬೇಕು. ಕೆಲಸ ಪೂರ್ಣಗೊಳ್ಳುವವರೆಗೆ ಜಿಲ್ಲೆಯ ಎಲ್ಲ ಮಠಾಧೀಶರೂ ನಿಮ್ಮೊಂದಿಗೆ ನಿಲ್ಲುವಂತೆ ಮಾಡುತ್ತೇವೆ’ ಎಂದು ನಾವದಗಿಯ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು ಹೇಳಿದರು.
ಕಲಕೇರಿಯ ಸಿದ್ದರಾಮ ಶಿವಾಚಾರ್ಯರು, ಮಠಾಧೀಶರಾದ ಸಾಸನೂರದ ಮಹಾಂತಲಿಂಗ ಶಿವಾಚಾರ್ಯರು, ಕೊಡಗಾನೂರದ ಕುಮಾರ ಶ್ರೀ ಅವರು ಹೋರಾಟ ಬೆಂಬಲಿಸಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸನಗೌಡ ವಣಕಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನೆಯ ರೈತ ಹೋರಾಟಗಾರರು, 38 ಗ್ರಾಮಗಳ ರೈತ ಪ್ರತಿನಿಧಿಗಳೊಂದಿಗೆ ಇನ್ನೂರಕ್ಕೂ ಅಧಿಕ ರೈತರು ಭಾಗವಹಿಸಿದ್ದರು.
ಹೋರಾಟಕ್ಕೆ ಬೆಂಬಲ: ತಾಳಿಕೋಟೆ ದಲಿತ ಸಂಘಟನೆಗಳವರು, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ ಹಾಗೂ ಅನೇಕ ರೈತ ಮುಖಂಡರು ಹೋರಾಟದ ಸ್ಥಳಕ್ಕೆ ಬಂದು ಹೋರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.
ತಹಶೀಲ್ದಾರ ಭೇಟಿ: ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ ಡಾ.ವಿನಯಾ ಹೂಗಾರ ಅವರು ರೈತರ ಹೋರಾಟವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಸರ್ಕಾರದಿಂದ ಡಿಪಿಆರ್ ಮಾಡಲಾಗುತ್ತಿದೆ ಎಂದರು. ರೈತರ ಮನ ಒಲಿಸುವ ಪ್ರಯತ್ನ ಯಶ ನೀಡಲಿಲ್ಲ. ಅನುದಾನ ಮಂಜೂರಾಗುವವರಗೆಗೆ ಸ್ಥಳದಿಂದ ಕದಲುವುದಿಲ್ಲವೆಂದು ಹೋರಾಟಗಾರರು ಸ್ಪಷ್ಟಪಡಿಸಿದರು.
ಕತ್ತೆಗಳ ಮೆರವಣಿಗೆ ಇಂದು
ತಾಳಿಕೋಟೆ: ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯ ಅಂತಿಮ ಹಂತದ ಎಫ್ಐಸಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಕೊಡಗಾನೂರ ಗ್ರಾಮದ ಹತ್ತಿರ ರೈತರು ನಡೆಸುತ್ತಿರುವ ಹೋರಾಟದ ಅಂಗವಾಗಿ ಬುಧವಾರ ಬೆಳಿಗ್ಗೆ 11.00ಗಂಟೆಗೆ ಕತ್ತೆಗಳ ಮೆರವಣಿಗೆ ಮಾಡುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕತ್ತೆಗಳ ಮೆರವಣಿಗೆಯು ಡಾ.ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ ಕಚೇರಿಯವರೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯುವುದು. ಮುಂದಿನ ದಿನಗಳಲ್ಲಿ ತಾಳಿಕೋಟೆ ಪಟ್ಟಣದಲ್ಲಿ ಅಪಾರ ಸಂಖ್ಯೆಯ ಎತ್ತಿನ ಬಂಡಿಗಳ ಮೂಲಕ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ರೈತ ಮುಖಂಡರಾದ ಪ್ರಭುಗೌಡ ಬಿರಾದಾರ ಗುರುರಾಜ ಪಡಶೆಟ್ಟಿ ಶಿವಪುತ್ರ ಚೌಧರಿ ಮಂಜು ಬಡಿಗೇರ ಬಾಬುಗೌಡ ಪಾಟೀಲ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.