ವಿಜಯಪುರ: ಕೋಲ್ಹಾರ ತಾಲ್ಲೂಕಿನ ರಾಣಿಹಾಳ ಗ್ರಾಮದಲ್ಲಿ ರಾತ್ರಿ ವೇಳೆ ಹೊಲಕ್ಕೆ ನೀರು ಹಾಯಿಸುವ ವೇಳೆ ದಾಳಿ ನಡೆಸಲು ಯತ್ನಿಸಿದ ಮೊಸಳೆಯನ್ನು ಹಿಡಿದು, ಕೈಕಾಲು ಕಟ್ಟಿ ಟ್ರ್ಯಾಕ್ಟರ್ ಮೂಲಕ ವಿದ್ಯುತ್ ವಿತರಣಾ ಕೇಂದ್ರಕ್ಕೆ ತಂದ ರೈತರು ಹೆಸ್ಕಾಂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಡರಾತ್ರಿ ವಿದ್ಯುತ್ ನೀಡುವುದರಿಂದ ಕತ್ತಲೆಯಲ್ಲಿ ಹೊಲಗಳಿಗೆ ನೀರುಣಿಸುವುದು ಕಷ್ಟವಾಗಿದೆ. ಮೊಸಳೆ, ಹಾವು, ಚೇಳುಗಳು ದಾಳಿ ನಡೆಸುತ್ತವೆ ಎಂದು ರೈತರು ಅಳಲು ತೋಡಿಕೊಂಡರು.
ರಾತ್ರಿ ವೇಳೆ ವಿದ್ಯುತ್ ನೀಡುತ್ತಿರುವುದರಿಂದ ನಿದ್ದೆಗೆಟ್ಟು ಹೊಲಕ್ಕೆ ನೀರು ಹರಿಸಬೇಕಾಗುತ್ತದೆ. ನಾವು ಎದುರಿಸುವ ಸಮಸ್ಯೆ ಏನು ಎಂಬುದನ್ನು ಹೆಸ್ಕಾಂ ಸಿಬ್ಬಂದಿಗೆ ಅರ್ಥ ಮಾಡಿಸುವುದಕ್ಕಾಗಿ ಮೊಸಳೆಯನ್ನು ವಿದ್ಯುತ್ ವಿತರಣಾ ಕೇಂದ್ರಕ್ಕೆ ತಂದಿದ್ದೇವೆ ಎಂದು ರೈತರು ತಿಳಿಸಿದರು.
ರಾತ್ರಿ ಬದಲು ಹಗಲು ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ರೈತರು ಮನವಿ ಮಾಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮನವೊಲಿಸಿ ಮೊಸಳೆ ತೆಗೆದುಕೊಂಡು ಹೋಗಿ ಕೃಷ್ಣಾ ನದಿಗೆ ಬಿಟ್ಟರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.