ADVERTISEMENT

‘ಸಮಗ್ರ ಕೃಷಿಯಿಂದ ರೈತರ ಆದಾಯ ದ್ವಿಗುಣ’

ವಿಜಯಪುರ ನಗರದಲ್ಲಿ ಕೃಷಿ ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 15:20 IST
Last Updated 2 ಸೆಪ್ಟೆಂಬರ್ 2022, 15:20 IST
ವಿಜಯಪುರ ನಗರದ ದರ್ಬಾರ್‌ ಹೈಸ್ಕೂಲಿನ ಆವರಣದಲ್ಲಿ ಆಯೋಜಿಸಲಾಗಿರುವ ಕೃಷಿ ಮೇಳದಲ್ಲಿ ಜನರು ವಸ್ತು ಪ್ರದರ್ಶನ ವೀಕ್ಷಿಸಿದರು
ವಿಜಯಪುರ ನಗರದ ದರ್ಬಾರ್‌ ಹೈಸ್ಕೂಲಿನ ಆವರಣದಲ್ಲಿ ಆಯೋಜಿಸಲಾಗಿರುವ ಕೃಷಿ ಮೇಳದಲ್ಲಿ ಜನರು ವಸ್ತು ಪ್ರದರ್ಶನ ವೀಕ್ಷಿಸಿದರು   

ವಿಜಯಪುರ: ಕೃಷಿಕರು ಅಧಿಕ ಆದಾಯ ನೀಡುವ ತರಕಾರಿ, ಹಣ್ಣು, ಔಷಧ ಹಾಗೂ ಸುಗಂಧ ದ್ರವ್ಯ ಬೆಳೆಗಳನ್ನು ಬೆಳೆದು ದ್ವಿಗುಣ ಲಾಭ ಗಳಿಸಬಹುದು ಎಂದುಬಾಗಲಕೋಟೆತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿಡಾ ಕೆ. ಎಂ. ಇಂದಿರೇಶ್ ಹೇಳಿದರು.

ನಗರದ ದರ್ಬಾರ್‌ ಹೈಸ್ಕೂಲಿನ ಆವರಣದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ವಿಜಯಪುರ ಕೃಷಿ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಕೃಷಿ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯಪುರ ಜಿಲ್ಲೆಗೆ ಕೀರ್ತಿ ತರುವ ಲಿಂಬೆ ಹಣ್ಣಿಗೆ ಭೌಗೋಳಿಕ ಮಾನ್ಯತೆಗಾಗಿ(ಜಿ ಐ ಟ್ಯಾಗ್) ಪ್ರಯತ್ನ ನಡೆಸಿದ್ದು ಸದ್ಯದಲ್ಲಿಯೇ ಮಾನ್ಯತೆ ಸಿಗಲಿದೆ ಎಂದು ತಿಳಿಸಿದರು.

ADVERTISEMENT

ಕಾಯಿಪಲ್ಲೆಗಳಲ್ಲಿ ಬಣ್ಣದ ದೊಣ್ಣಮೆಣಸಿನಕಾಯಿ, ಟೊಮೆಟೊ, ಹಣ್ಣಿನ ಬೆಳೆಗಳಾದ ದ್ರಾಕ್ಷಿ ಬಾಳೆ, ದಾಳಿಂಬೆ ಹಣ್ಣು, ಜಿರೇನಿಯಾ, ಸ್ಟೀವಿಯಾ, ಸುಗಂಧ ದ್ರವ್ಯ ಬೆಳೆಗಳನ್ನು ಕೃಷಿ ಬೆಳೆಗಳೊಂದಿಗೆ ಸಂಯೋಜಿತವಾಗಿ ಬೆಳೆದು ದ್ವಿಗುಣ ಆದಾಯ ಗಳಿಸಬಹುದು ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನಾಗರದಿನ್ನಿ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ರೈತರು ಜಾಗೃತರಾಗಿ ವೈಜ್ಞಾನಿಕ ಮಾಹಿತಿ ಪಡೆದು ಕೃಷಿಯಲ್ಲಿ ಲಾಭ ಗಳಿಸಬೇಕು. ಜೊತೆಗೆ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಜಿಲ್ಲೆಗೊಂದರಂತೆ ಸಂಸ್ಕರಣಾ ಕೇಂದ್ರಗಳನ್ನು ಕೃಷಿಕರಿಗೆ ಅವಶ್ಯವಿರುವ ಪರಿಕರಗಳ ಮಾಹಿತಿ ಒಂದೇ ಸೂರಿನಡಿ ದೊರೆಯುವಂತೆ ಸಂಘಟಿಸಿದ ಕೃಷಿ ಮೇಳ ಈ ಭಾಗದ ಕೃಷಿಕರಿಗೆ ಉಪಯುಕ್ತವಾಗಲಿ ಎಂದು ಹಾರೈಸಿದರು.

ಲಿಂಬೆ ಮಂಡಳಿಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ಲಿಂಬೆ ಜಾಗತಿಕ ಮಾನ್ಯತೆ ನೀಡುವ ಬಗ್ಗೆ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಕುರಿತಾಗಿ ರೈತರಿಗೆ ತಿಳಿ ಹೇಳುವುದು ಅತೀ ಅವಶ್ಯಕ ಎಂದರು.

****

ಕೃಷಿ ಮೇಳದಲ್ಲಿ ರೈತ ಸಮುದಾಯಕ್ಕೆ ಅತ್ಯಗತ್ಯವಾಗಿ ಬೇಕಾದ ಆಧುನಿಕ ತಂತ್ರಜ್ಞಾನ, ಬೆಳೆಯ ಬಗ್ಗೆ ಮಾಹಿತಿಗಿಂತ ಬಟ್ಟೆ, ಆಹಾರ ಉತ್ಪನ್ನ, ನೋವಿನ ಎಣ್ಣೆಗಳ ಪ್ರದರ್ಶನ, ಮಾರಾಟಕ್ಕೆ ಆದ್ಯತೆ ನೀಡಿರುವುದು ಖಂಡನೀಯ

ಶರಣು ಸಬರದ, ಅಧ್ಯಕ್ಷ, ಯುವ ‍ಪರಿಷತ್‌, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.