ವಿಜಯಪುರ: ಆಲಮೇಲ ಪಟ್ಟಣದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪಿಸಲು ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡರುವುದಕ್ಕೆ ಈ ಭಾಗದ ದ್ರಾಕ್ಷಿ ಬೆಳೆಗಾರರಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ವಿಜಯಪುರ ತಾಲ್ಲೂಕು ತಿಡಗುಂದಿಯಲ್ಲಿ ಈಗಾಗಲೇ ತೋಟಗಾರಿಕೆ ವಿಸ್ತರಣಾ, ಸಂಶೋಧನಾ ಘಟಕವಿದ್ದು, ಅಲ್ಲಿಯೇ ಮಹಾವಿದ್ಯಾಲಯವನ್ನು ಸ್ಥಾಪಿಸಬೇಕು ಎಂಬ ಬೇಡಿಕೆ ಈ ಹಿಂದಿನಿಂದಲೂ ಇತ್ತು. ಆದರೆ, ಈಗ ಏಕಾಏಕಿ ಆಲಮೇಲ ಪಟ್ಟಣವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
‘ವಿಜಯಪುರ ತೋಟಗಾರಿಕೆ ಜಿಲ್ಲೆಯಾಗಿದ್ದು, ಸುಮಾರು ಒಂದು ಲಕ್ಷ ಹೆಕ್ಟೇರ್ ತೋಟಗಾರಿಕೆ ಪ್ರದೇಶವನ್ನು ಹೊಂದಿದೆ. ದ್ರಾಕ್ಷಿ, ನಿಂಬೆ, ದಾಳಿಂಬೆ, ಬಾಳೆ ಮತ್ತು ತರಕಾರಿಯನ್ನು ಬೆಳೆಯಲಾಗುತ್ತಿದೆ. ಇದರಿಂದ ವಾರ್ಷಿಕ ನೂರಾರು ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ತಿಡಗುಂದಿಯಲ್ಲಿ ಈಗಾಗಲೇ ತೋಟಗಾರಿಕೆ ವಿಸ್ತರಣಾ, ಸಂಶೋಧನಾ ಘಟಕವಿದೆ. ಅಲ್ಲದೇ, ಎಲ್ಲ ಬೆಳೆಗಾರರಿಗೂ ತಿಡಗುಂದಿ ಸೂಕ್ತ ಸ್ಥಳವಾಗಿದೆ. ಅಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪಿಸುವುದನ್ನು ಬಿಟ್ಟು, ಆಲಮೇಲದಲ್ಲಿ ಸ್ಥಾಪಿಸುತ್ತಿರುವುದು ಸರಿಯಲ್ಲ’ ಎಂದು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ, ಉಪಾಧ್ಯಕ್ಷ ಡಾ.ಕೆ.ಎಚ್.ಮುಂಬಾರೆಡ್ಡಿ, ನಿರ್ದೇಶಕರಾದ ಪಿ.ಎಂ.ಗದ್ಯಾಳ, ಎಸ್.ಎಚ್.ನಾಡಗೌಡ ಹೇಳಿದ್ದಾರೆ.
‘ತಿಡಗುಂದಿಯಲ್ಲೇ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪಿಸುವಂತೆ ಅನೇಕ ಬಾರಿ ಹೋರಾಟ ಮಾಡಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಮನವಿಪತ್ರ ಸಲ್ಲಿಸಲಾಗಿದೆ. ಆದಾಗ್ಯೂ, ಅದನ್ನು ಆಲಮೇಲ ಪಟ್ಟಣದಲ್ಲಿ ಸ್ಥಾಪಿಸುತ್ತಿರುವುದು ಖಂಡನೀಯ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.