ADVERTISEMENT

ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ: ಅನಿರ್ದಿಷ್ಟಾವಧಿ ಧರಣಿ ವಾಪಸ್

ಸಚಿವ ಎಂ.ಬಿ.‌ ಪಾಟೀಲರಿಂದ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 6:20 IST
Last Updated 21 ಜುಲೈ 2025, 6:20 IST
ತಾಳಿಕೋಟೆ ತಾಲ್ಲೂಕಿನ ಕೊಡಗಾನೂರ ಬಳಿ ರೈತರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.‌ಪಾಟೀಲ ಭಾನುವಾರ ಭೇಟಿ ನೀಡಿ, ಮಾತನಾಡಿದರು 
ತಾಳಿಕೋಟೆ ತಾಲ್ಲೂಕಿನ ಕೊಡಗಾನೂರ ಬಳಿ ರೈತರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.‌ಪಾಟೀಲ ಭಾನುವಾರ ಭೇಟಿ ನೀಡಿ, ಮಾತನಾಡಿದರು    

ವಿಜಯಪುರ: ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ತಾಳಿಕೋಟೆ ತಾಲ್ಲೂಕಿನ ಕೊಡಗಾನೂರ ಬಳಿ ಒಂಬತ್ತು ದಿನಗಳಿಂದ ರೈತರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.‌ಪಾಟೀಲ ಭಾನುವಾರ ಭೇಟಿ ನೀಡಿ, ಮಾತುಕತೆ ನಡೆಸಿದರು.

ಏತ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವುದಾಗಿ ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಧರಣಿ ಹಿಂಪಡೆದರು.

ಕೆ.ಬಿ.ಜೆ.ಎನ್.ಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಮೋಹನರಾಜ್ ಅವರಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು, ಈ ಯೋಜನೆಯ ಕುರಿತು ಮಾಹಿತಿ ಪಡೆದರು.

ADVERTISEMENT

ಬಳಿಕ ಮಾತನಾಡಿದ ಸಚಿವರು, ‘ಬೂದಿಹಾಳ-ಪೀರಾಪುರ ಯೋಜನೆ ನನ್ನ ಕನಸಿನ ಕೂಸು. ಈ ಹಿಂದೆ 2013-18ರ ಅವಧಿಯಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿತ್ತು. ಆದರೆ, ನೀರು ಹಂಚಿಕೆ ಸಮಸ್ಯೆ ಮತ್ತು‌ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿಗೆ ಹಿನ್ನಡೆಯಾಗಿತ್ತು. ಈಗಲೂ ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದು, ನಮ್ಮ ಕನಸಿನ ಈ ಮಹತ್ವದ ಯೋಜನೆಯನ್ನು ಮರುಜೀವಿತಗೊಳಿಸಲಾಗುವುದು’ ಎಂದು ಹೇಳಿದರು.

‘ಮುಂದಿನ 3 ತಿಂಗಳೊಳಗೆ ಹೊಲಗಾಲುವೆ ನಿರ್ಮಿಸಲಾಗುವ ಜಮೀನುಗಳ ರೈತರ ಸಹಮತಿಯೊಂದಿಗೆ ವಿವರವಾದ ಯೋಜನಾ ವರದಿ (ಡಿಪಿಆರ್) ಪೂರ್ಣಗೊಳಿಸಲಾಗುವುದು. 4ನೇ ತಿಂಗಳಲ್ಲಿ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದರು.

‘9 ತಿಂಗಳಲ್ಲಿ ಹೊಲಗಾಲುವೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ವಿಜಯಪುರದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಯ ಕಾಮಗಾರಿಯ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿಸಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಈ ಹಿಂದೆ ಜಲಸಂಪನ್ಮೂಲ ಮತ್ತು ಗೃಹ ಸಚಿವರಾಗಿದ್ದ ಎರಡೂ ಅವಧಿಯಲ್ಲಿ‌ ತಾವು ನೀರಾವರಿ ಯೋಜನೆಗಳ ಜಾರಿಗೆ‌ ಕೈಗೊಂಡ ಕ್ರಮಗಳನ್ನು ಅವರು ತಿಳಿಸಿದರು.

ಆಲಮೇಲ ಸ್ವಾಮೀಜಿ ಮಾತನಾಡಿ, ‘ಸಚಿವ ಎಂ.ಬಿ. ಪಾಟೀಲರು ನುಡಿದಂತೆ ನಡೆಯುತ್ತಿರುವ ಬಸವ ನಾಡಿನ ಭಗೀರಥ.  ಸಿದ್ಧೇಶ್ವರ ಸ್ವಾಮೀಜಿ ಅವರು ಬೊಗಸೆ ನೀರು‌ ಕೇಳಿದರೆ ಅವರು ಕೊಡ ನೀರು‌ ತಂದು ಕೊಟ್ಟಿದ್ದಾರೆ. ರೈತರು ಡಿಪಿಆರ್ ಮಾಡುವಾಗ ಅಧಿಕಾರಿಗಳೊಂದಿಗೆ ಸಹಕರಿಸಿರಿ’ ಎಂದು ಹೇಳಿದರು.

ಸಚಿವರ ಭರವಸೆಗೆ ಒಪ್ಪಿದ ರೈತರು‌ ಧರಣಿ ಸತ್ಯಾಗ್ರಹ ಹಿಂಪಡೆದರು. ಇದರಿಂದಾಗಿ ಕಳೆದ ದಿನದಿಂದ ನಡೆಯುತ್ತಿರುವ ರೈತರ ಹೋರಾಟ ಸುಖಾಂತ್ಯ ಕಂಡಂತಾಗಿದೆ.

ದೇವರ ಹಿಪ್ಪರಗಿ‌ ಶಾಸಕ ರಾಜುಗೌಡ ಪಾಟೀಲ, ಮಾಜಿ‌ ಶಾಸಕ ಶರಣಪ್ಪ ಸುಣಗಾರ, ರೈತ ಮುಖಂಡರಾದ ಪ್ರಭುಗೌಡ ಲಿಂಗದಳ್ಳಿ, ಬಿ.ಎಸ್. ಪಾಟೀಲ ಯಾಳಗಿ, ಸುಭಾಸ ಛಾಯಾಗೋಳ, ಅರವಿಂದ ಕುಲಕರ್ಣಿ, ಸುರೇಶಬಾಬು ಬಿರಾದಾರ, ಪ್ರಭು ಬಿರಾದಾರ, ಶಿವಪುತ್ರ ಚೌಧರಿ, ಕಾಶಿನಾಥ ತಳವಾರ ಇದ್ದರು.

ರೈತರ ಹಿತರಕ್ಷಣೆ ನಮ್ಮ ಸರ್ಕಾರದ ಆದ್ಯತೆಯಾಗಿದ್ದು ಅವರ ಕನಸುಗಳನ್ನು ಸಾಕಾರಗೊಳಿಸಲು ನಾವು ಸದಾ ಬದ್ಧರಾಗಿದ್ದೇವೆ
ಎಂ.ಬಿ.‌ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.