ವಿಜಯಪುರ: ತಮ್ಮ ಸಹಚರರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಕಾಂಗ್ರೆಸ್ ಮುಖಂಡ ಮಹಾದೇವ ಸಾಹುಕಾರ ಬೈರಗೊಂಡ ಅವರ ಮೇಲೆ ಅಪರಿಚಿತರು ವಿಜಯಪುರ ತಾಲ್ಲೂಕಿನ ಕನ್ನಾಳ ಕ್ರಾಸ್ ಹತ್ತಿರ ಗುಂಡಿನ ದಾಳಿ ನಡೆಸಿದ್ದಾರೆ.
ಮೊದಲು ಟಿಪ್ಪರ್ನಿಂದ ಕಾರಿಗೆ ಡಿಕ್ಕಿ ಹೊಡೆದ ದುಷ್ಕರ್ಮಿಗಳು, ನಂತರ ಮನಬಂದಂತೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಕೆರೂರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಬೈರಗೊಂಡ ಅವರ ಮ್ಯಾನೇಜರ್ ಬಾಬುರಾಮ ಮಾರುತಿ ಕಂಚನಾಳ (64) ಅವರಿಗೆ ಗುಂಡು ತಗುಲಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೈರಗೊಂಡ ಸಾಹುಕಾರಗೆ ಹೊಟ್ಟೆಯ ಭಾಗದಲ್ಲಿ ಎರಡು ಹಾಗೂ ಬೆನ್ನಿನ ಪಕ್ಕೆಲಬಿಗೆ ಒಂದು ಗುಂಡು ತಗುಲಿದ್ದು, ಸ್ಥಿತಿ ಗಂಭೀರವಾಗಿದೆ.
ವಾಹನ ಚಾಲಕ ಲಕ್ಷಣ ಖೋಗಾಂವ (25) ಅವರ ಕಾಲು ಮುರಿದಿದೆ. ಗನ್ ಮ್ಯಾನ್ ರಮೇಶ ತಲೆಗೆ ಗಾಯವಾಗಿದೆ. ಇನ್ನುಳಿದ ಗನ್ ಮ್ಯಾನ್ಗಳಾದ ಜಗಬೀರ್ಸಿಂಗ್ ಹಾಗೂ ಹುಸೇನಿ ಬಸಣ್ಣ ಭಜಂತ್ರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವಿಜಯಪುರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಜಯಪುರ ನಗರದ ಹೊರವಲಯದ ಭೂತನಾಳ ಕ್ರಾಸ್ ಬಳಿ ಇರುವ ಹಣಮಂತ ಚಿಂಚಲಿ ಅವರ ಪೈಪ್ ಫ್ಯಾಕ್ಟರಿಗೆ ಮಹಾದೇವ ಸಾಹುಕಾರ ಭೈರಗೊಂಡ ಸೋಮವಾರ ಮಧ್ಯಾಹ್ನ 3 ರಿಂದ 3.30ರ ವೇಳೆಗೆ ಭೇಟಿ ನೀಡಿದ್ದರು. ಅಲ್ಲಿಂದ ಚಡಚಣ ಕಡೆಗೆ ಹೊರಟಾಗ ಕನ್ನಾಳ ಕ್ರಾಸ್ ಹತ್ತಿರದಾಳಿ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.