
ಇಂಡಿ: ‘ಎಲ್ಲರೂ ಉತ್ತಮ ಪೌಷ್ಟಿಕಾಂಶದ ಆಹಾರ ಸೇವಿಸಿ, ಪ್ರತಿನಿತ್ಯ ವ್ಯಾಯಾಮ ಮಾಡಿ ಆರೋಗ್ಯ ಸಂಪತ್ತು ಕಾಯ್ದುಕೊಂಡು ಆಯುಷ್ಯ ವೃದ್ಧಿಸಿಕೊಳ್ಳಿ’ ಎಂದು ಕಜಾಪ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ವಿ. ಪಾಟೀಲ ಹೇಳಿದರು.
ಪಟ್ಟಣದ ಡಾ.ರಾಜಕುಮಾರ ಮಾಳಿ ಅವರ ಆಸ್ಪತ್ರೆಯಲ್ಲಿ ನಡೆದ ಹಿರೇಬೇವನೂರ ಗ್ರಾಮದ ಭೀಮಾಶಂಕರ ವಡ್ಡರ ಶಿಕ್ಷಕರ ಪುತ್ರ ವಿಜಯನ 8ನೇ ವರ್ಷದ ಜನ್ಮದಿನದ ಸ್ಮರಣಾರ್ಥವಾಗಿ ಬುಧವಾರ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ವೈದ್ಯರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಸಿದ್ದು ಪರಗೊಂಡ ಮಾತನಾಡಿ, ‘ಭೀಮಾಶಂಕರ ಅವರ ಪುತ್ರನ ಜನ್ಮ ದಿನದ ನಿಮಿತ್ತ ಕಳೆದ ಆರು ವರ್ಷಗಳಿಂದ ಆರೋಗ್ಯ ತಪಾಸಣೆಗೆ ಡಾ. ಆರ್. ಎಂ. ಮಾಳಿ ತಮ್ಮ ದವಾಖಾನೆಯಲ್ಲಿ ಉಚಿತವಾಗಿ ಸ್ಥಳ ಹಾಗೂ ವೇದಿಕೆ ಒದಗಿಸಿಕೊಡುತ್ತ ಬಂದಿರುವುದು ಶ್ಲಾಘನಿಯ. ಈ ವರ್ಷ 25ಕ್ಕಿಂತ ಹೆಚ್ಚಿನ ಜನ ಸರ್ಜರಿ ಚಿಕಿತ್ಸೆ ಮಾಡಿಸಿಕೊಳ್ಳಲು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ಹೋಗಲು ದಾಖಲಾಗಿದ್ದಾರೆ’ ಎಂದರು.
ಡಾ. ಮಾಳಿ ಅಧ್ಯಕ್ಷತೆ ವಹಿಸಿದ್ದ ವಹಿಸಿದ್ದರು. ಹಿರೇಬೇವನೂರ ಹಾಗೂ ಹೊನಗನಹಳ್ಳಿ ಮಠದ ಪೀಠಾಧಿಪತಿ ದಯಾನಂದ ಹಿರೇಮಠ ಸಾನಿಧ್ಯ ವಹಿಸಿದ್ದರು. ಹಿರಿಯ ಸಾಹಿತಿ ಡಿ.ಎನ್. ಅಕ್ಕಿ, ಭೀಮಾಶಂಕರ ವಡ್ಡರ, ಸಮಾಜ ಸೇವಕ ಸೋಮಶೇಖರ ಪಾತಾಳಿ ಮಾತನಾಡಿದರು.
ಇಂಡಿ ಪಟ್ಟಣದ ಆರ್.ಎಂ. ಶಹಾ ಪಬ್ಲಿಕ್ ಶಾಲೆಯ ಅಧ್ಯಕ್ಷ ಡಿ.ಆರ್. ಶಹಾ, ಹಡಪದ ಅಪ್ಪಣ್ಣ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿದ್ದರಾಯ ಅಪ್ತಾಗಿರಿ, ಆಡಳಿತಾಧಿಕಾರಿ ಪಂಡಿತ ಬಿರಾದಾರ, ಸಪ್ತಗಿರಿ ಆಸ್ಪತ್ರೆ ವೈದ್ಯ ಡಾ. ಶ್ರವಣ, ಪ್ರಶಾಂತ, ವಿಶಾಲ, ನಂದಾ, ಮಹದೇವ ಗುಡ್ಡೋಡಗಿ, ಶಿವರಾಯ ಬಿರಾದಾರ ಹಾಗೂ ಶಂಕರ ಬೋರಾಮಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.