ADVERTISEMENT

ಬಯಕೆ ಅದುಮಿಟ್ಟು ಭವಿಷ್ಯಕ್ಕಾಗಿ ಕೆಲಸ

ಬಸವರಾಜ ಸಂಪಳ್ಳಿ
Published 14 ಮೇ 2021, 11:07 IST
Last Updated 14 ಮೇ 2021, 11:07 IST
ಪ್ರೇರಣಾ ಶ್ರೀನಿವಾಸ ದೊಡ್ಡಮನಿ
ಪ್ರೇರಣಾ ಶ್ರೀನಿವಾಸ ದೊಡ್ಡಮನಿ   

ವಿಜಯಪುರ: ‘ಏಳು ತಿಂಗಳ ಗರ್ಭಿಣಿ ನಾನು. ಅದು ತಿನ್ನಬೇಕು, ಇದು ತಿನ್ನಬೇಕು ಎಂಬ ಬಯಕೆಯಾಗುತ್ತದೆ. ಆದರೆ, ಕೆಲಸದ ನಡುವೆ ಬಯಕೆಗಳನ್ನ ಮರೆಯುತ್ತಿದ್ದೇನೆ. ಸದ್ಯ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದೇನೆ. ಕೋವಿಡ್‌ ಸಂಕಷ್ಟದ ಈ ಸಮಯದಲ್ಲಿ ಕಷ್ಟಪಟ್ಟು, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಭವಿಷ್ಯದಲ್ಲಿ ಕೆಲಸ ಕಾಯಂ ಆಗುವ ಆಶಯವಿದೆ'

ಹೀಗೆಂದು ತಮ್ಮ ಮನದಾಳದ ಅಭಿಪ್ರಾಯವನ್ನು ಬಿಚ್ಚಿಟ್ಟವರು ವಿಜಯಪುರ ಜಿಲ್ಲಾ ಸರ್ವೇಕ್ಷಣಾ ವಿಭಾಗದ ಆರ್‌ಟಿಪಿಸಿಆರ್‌ ಕೇಂದ್ರದಲ್ಲಿ ಕೊರೊನಾ ಸೋಂಕು ಪರೀಕ್ಷೆಯಲ್ಲಿ ನಿರತ ಅಥಣಿಯ ಸ್ಟಾಫ್‌ ನರ್ಸ್‌ ಪ್ರೇರಣಾ ಶ್ರೀನಿವಾಸ ದೊಡ್ಡಮನಿ.

ಗರ್ಭಿಣಿ ಇದ್ದೀಯಾ, ಈ ಸಂದರ್ಭದಲ್ಲಿ ಹೆಚ್ಚು ಕೆಲಸ ಮಾಡಬಾರದು, ಒತ್ತಡ ಆಗಬಾರದು, ನೀನು ದುಡಿಯೋ ಅಗತ್ಯ ಇಲ್ಲ, ಕೆಲಸ ಬಿಟ್ಟು ಮನೆಗೆ ಬಾ ಎಂದು ಪತಿ ಶ್ರೀನಿವಾಸ ದೊಡ್ಡಮನಿ(ವಕೀಲ) ಅವರು ಹಲವು ಬಾರಿ ಹೇಳಿದರೂ ಅವರನ್ನು ಹೇಗೋ ಸಮಾಧಾನ ಪಡಿಸಿ, ಕೆಲಸ ನಿರ್ವಹಿಸುತ್ತಿದ್ದೇನೆ

ADVERTISEMENT

ವಿಜಯಪುರದಲ್ಲಿ ಇರುವ ಸಂಬಂಧಿಕರ ಮನೆಯಲ್ಲೇ ಪ್ರತ್ಯೇಕವಾಗಿದ್ದುಕೊಂಡು ಆರ್‌ಟಿಪಿಸಿಆರ್‌ ಕೇಂದ್ರಕ್ಕೆ ನಿತ್ಯ ಹೋಗಿ ಬರುತ್ತಿದ್ದೇನೆ. ಇನ್ನೊಂದು ತಿಂಗಳು ಕೆಲಸ ಮಾಡಿ ಬಳಿಕ ಹೆರಿಗೆ ರಜೆ ತೆಗೆದುಕೊಳ್ಳಬೇಕೆಂದು ಕೊಂಡಿರುವೆ. ಹೆರಿಗೆಯಾದ ಬಳಿಕ ಮರಳಿ ಕೆಲಸಕ್ಕೆ ಬರುತ್ತೇನೆ.

ಕೆಲಸಕ್ಕೆ ಸೇರುವ ಮುನ್ನಾ ಕೋವಿಡ್‌ ಡ್ಯೂಟಿಗೆ ಹಾಕುತ್ತಾರೆ ಎಂದು ಯೋಚಿಸಿರಲಿಲ್ಲ. ಇಲ್ಲಿಗೆ ಬಂದ ಬಳಿಕ ತಿಳಿಯಿತು. ಆದರೂ ಬೇಸರವಿಲ್ಲದೇ ಪ್ರತಿನಿತ್ಯ ಕೆಲಸ ಮಾಡುತ್ತಿರುವೆ. ಈಗ ಕೋವಿಡ್‌ ಸಂದರ್ಭದಲ್ಲಿ ಕೆಲಸ ಮಾಡಿದರೆ ಮುಂದೆ ಕೆಲಸ ಕಾಯಂ ಮಾಡುತ್ತಾರೆ ಎಂಬ ನಂಬಿಕೆ ಇದೆ.

ಕೆಲಸದ ಒತ್ತಡದಲ್ಲಿ ಬಿಡುವು ಸಿಗುತ್ತಿಲ್ಲ. ಬೆಳಿಗ್ಗೆ 10ಕ್ಕೆ ಬಂದರೆ ಮಧ್ಯಾಹ್ನ ಊಟದ ಸಮಯದಲ್ಲಿ ಅರ್ಧ ತಾಸು ಬಿಡುವು ಬಳಿಕ ಮತ್ತೆ ಕೆಲಸ. ಹೀಗಾಗಿ ಒತ್ತಡ ಹೆಚ್ಚಾಗಿದೆ. ಗರ್ಭಿಣಿಯಾಗಿರುವುದರಿಂದ ಏನೇನೋ ತಿನ್ನಬೇಕು ಎಂಬ ಬಯಕೆಯಾಗುವುದು ಸಹಜ. ಆದರೆ, ಈ ಕೆಲಸದ ಒತ್ತಡದಲ್ಲಿ ಬಯಕೆಯೂ ಆಗುತ್ತಿಲ್ಲ.

ಎರಡೆರಡು ಮಾಸ್ಕ್‌, ಹ್ಯಾಂಡ್‌ ಸ್ಯಾನಿಟೈಸ್‌ ಮಾಡಿಕೊಂಡು ಆದಷ್ಟು ಸುರಕ್ಷಿತವಾಗಿ ಕೆಲಸ ಮಾಡುತ್ತಿದ್ದೇನೆ. ಈ ನನ್ನ ಕಷ್ಟಕ್ಕೆ ಭವಿಷ್ಯದಲ್ಲಿ ಒಳಿತಾಗುವ ಆಶಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.